ಮುಂಬೈ: ‘ನಿಜವಾದ ಅಯೋಧ್ಯೆ ಭಾರತದಲ್ಲಿಲ್ಲ, ನೇಪಾಳದಲ್ಲಿ ಇದೆ’ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೀಡಿರುವ ಹೇಳಿಕೆಯನ್ನು ಶಿವಸೇನೆ ಟೀಕಿಸಿದೆ. ‘ಇನ್ನು ಕೆಲವೇ ದಿನಗಳಲ್ಲಿ ಮೊಘಲ್ ಸುಲ್ತಾನ ಬಾಬರ್ ಕೂಡ ನೇಪಾಳದವರು ಅಂತ ಅವರು ಪ್ರತಿಪಾದಿಸಬಹುದು’ ಎಂದು ಶಿವಸೇನೆ ವ್ಯಂಗ್ಯವಾಡಿದೆ.
‘ರಾಮ ಜಗತ್ತಿಗೆ ಸೇರಿದವರು. ಆದರೆ, ಅವರ ಜನ್ಮಸ್ಥಳ ಅಯ್ಯೋಧ್ಯೆ. ಇದು ಭಾರತದಲ್ಲಿದೆ’ ಎಂದು ಪಕ್ಷದ ಮುಖವಾಣಿಯಾಗಿರುವ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.
‘ನೇಪಾಳವು ಚೀನಾದ ಕೈಗೊಂಬೆಯಾಗಿದೆ. ಚೀನಾದೊಂದಿಗೆ ನಿಕಟವಾಗುತ್ತಿದ್ದಂತೆ ಭಾರತ ಮತ್ತು ನೇಪಾಳದ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಒಲಿ ಅವರು ಮರೆತಿದ್ದಾರೆ’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
‘ಸರಯೂ ನದಿ ಹರಿಯುತ್ತಿರುವುದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿಯೇ ಹೊರತು ನೇಪಾಳದಲ್ಲಿ ಅಲ್ಲ. ಈ ಬಗ್ಗೆಪುರಾಣದಲ್ಲೂ ವಿಸ್ತಾರವಾಗಿ ಹೇಳಲಾಗಿದೆ. ಕಳೆದ 70–75 ವರ್ಷದಿಂದ ಅಯೋಧ್ಯೆ ಭಾರತದಲ್ಲೇ ಇದೆ. ರಾಮನ ಜನ್ಮ ಸ್ಥಳ ನೇಪಾಳವಾದರೆ ಈ ಬಗ್ಗೆ ಪುರಾವೆಗಳನ್ನು ನೀಡಲು ಒಲಿ ಯಾಕೆ ಇಷ್ಟೊಂದು ಸಮಯ ತೆಗೆದುಕೊಂಡರು’ ಎಂದು ಪ್ರಶ್ನಿಸಲಾಗಿದೆ.