ಜಕಾರ್ತ: ಇಂಡೊನೇಷ್ಯಾದ ಸುಮಾತ್ರ ದ್ವೀಪದ ಅರಣ್ಯದಲ್ಲಿ ಕಂಡು ಬಂದ ಬೆಂಕಿ, ದಟ್ಟ ಹೊಗೆ ಆಗಸವನ್ನೇ ಆವರಿಸಿತ್ತು. ಬೆಂಕಿಯ ಕೆನ್ನಾಲಿಗೆ, ಹೊಗೆ ಮೂಲಕ ಸೂರ್ಯ ಕಿರಣಗಳು ಹಾಯ್ದು ಹೋದ ಪರಿಣಾಮ ಆಗಸವೆಲ್ಲಾ ರಕ್ತಕೆಂಪು ಬಣ್ಣಕ್ಕೆ ತಿರುಗಿದ ವಿದ್ಯಮಾನಕ್ಕೆ ಈ ದ್ವೀಪ ಸಾಕ್ಷಿಯಾಗಿತ್ತು.
ಈ ವಿದ್ಯಮಾನವನ್ನು ಚಿತ್ರೀಕರಿಸಿದ್ದ ಯುನಿತಾ ಎಂಬುವವರು, ‘ಜೋರಾಗಿ ಬೀಸುವ ಗಾಳಿ, ದಟ್ಟವಾದ ಹೊಂಜಿನಿಂದಾಗಿ ಉಸಿರಾಡುವುದು ಕಷ್ಟವಾಗಿತ್ತು’ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಾಕಿದ್ದರು.
ಇದು ಕೆಲವೇ ಸಮಯದಲ್ಲಿ ಸಾಕಷ್ಟು ಪ್ರಚಾರ ಪಡೆಯಿತಲ್ಲದೇ, ಇನ್ಸ್ಟಾಗ್ರಾಂನಲ್ಲಿನ ವಿಡಿಯೊವನ್ನು ಮೂರು ದಿನಗಳಲ್ಲಿ 6 ಲಕ್ಷ ವೀಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಈ ವಿಡಿಯೊದಲ್ಲಿ ದೃಶ್ಯಗಳ ಬಗ್ಗೆ ನಾನಾ ರೀತಿಯ ವಿಶ್ಲೇಷಣೆಗಳೂ ಬಂದವು. ‘ಗಾಳಿಯಲ್ಲಿ ತೇಲಾಡುವ ಏರೋಸಾಲ್ ಎಂಬ ಘನ ಅಥವಾ ದ್ರವರೂಪದ ಕಣಗಳಿಂದಾಗಿ ಆಗಸದ ಬಣ್ಣ ರಕ್ತ ಕೆಂಪಾಗಿದೆ’ ಎಂದು ಅಮೆರಿಕದ ವಿಜ್ಞಾನಿ ಎ.ಆರ್.ರವಿಶಂಕರ ಅವರು ‘ಸೈಂಟಿಫಿಕ್ ಅಮೆರಿಕನ್’ ವೆಬ್ಸೈಟ್ನಲ್ಲಿ ಪ್ರಕಟಿಸಿದ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ.
ತರಹೇವಾರಿ ಪ್ರತಿಕ್ರಿಯೆಗಳ ಪೈಕಿ ಟ್ಟೀಟರ್ನಲ್ಲಿ ಝುನಿಶ್ ಎಂಬುವವರು ಮಾಡಿದ ಟ್ವೀಟ್ ಗಮನ ಸೆಳೆದಿದೆ. ‘ಇದು ಭೂಮಿ; ಮಂಗಳನ ಆಗಸವಲ್ಲ. ಇದು ಜಾಂಬಿ (ಸುಮಾತ್ರ ದ್ವೀಪದ ಒಂದು ಪ್ರದೇಶ) ಪ್ರದೇಶವೇ ಹೊರತು ಬಾಹ್ಯಾಕಾಶವಲ್ಲ. ನಾವು ಮನಷ್ಯರು. ಶುದ್ಧ ಗಾಳಿಯನ್ನು ಉಸಿರಾಡಬೇಕು, ಹೊಗೆಯನ್ನಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.