ಕರಾಚಿ: ಕಳೆದ ವಾರ ದುರಂತಕ್ಕೀಡಾಗಿದ್ದ ಪಾಕಿಸ್ತಾನ ವಿಮಾನದ ಅವಶೇಷಗಳಲ್ಲಿದ್ದ ಚೀಲಗಳಿಂದ ತನಿಖಾಧಿಕಾರಿಗಳಿಗೆ ₹3 ಕೋಟಿ ನಗದು ದೊರೆತಿದೆ. ವಿವಿಧ ದೇಶಗಳ ಕರೆನ್ಸಿಗಳನ್ನು ಒಳಗೊಂಡ ನಗದು ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಹೊರತಾಗಿಯೂ ಇಷ್ಟೊಂದು ದೊಡ್ಡ ಮೊತ್ತದ ನಗದನ್ನು ವಿಮಾನದೊಳಗೆ ಕೊಂಡೊಯ್ಯುವುದು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಅವಶೇಷಗಳಲ್ಲಿ ಇದ್ದ 2 ಚೀಲಗಳಿಂದ ಈ ನಗದು ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹಗಳನ್ನು ಗುರುತಿಸುವುದು, ಮೃತರ ಸ್ವತ್ತುಗಳನ್ನು ಪತ್ತೆ ಹಚ್ಚುವುದು ಹಾಗೂ ಅವರ ಕುಟುಂಬದವರಿಗೆ ಹಸ್ತಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದೂ ಅವರು ತಿಳಿಸಿದ್ದಾರೆ.
ಈ ಮಧ್ಯೆ, ದುರಂತಕ್ಕೀಡಾದ ವಿಮಾನದ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಪತ್ತೆಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪೈಲಟ್ಗಳ ನಡುವಿನ ಸಂಭಾಷಣೆಯನ್ನು ತಿಳಿಯಲು ಇದು ನೆರವಾಗಲಿದೆ. ಈ ಮೂಲಕ ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವಲ್ಲಿ ಕಾಕ್ಪಿಟ್ ಮುಖ್ಯ ಪಾತ್ರ ವಹಿಸಲಿದೆ.
ಕಳೆದ ಶುಕ್ರವಾರ ಪಾಕಿಸ್ತಾನದ ವಿಮಾನವು ಕರಾಚಿಯ ಜನವಸತಿ ಪ್ರದೇಶದಲ್ಲಿ ಪತನಗೊಂಡು 97 ಮಂದಿ ಮೃತಪಟ್ಟಿದ್ದರು. ಇಬ್ಬರು ಪವಾಡಸದೃಶರಾಗಿ ಪಾರಾಗಿದ್ದರು.