ಕಠ್ಮಂಡು: ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು, ತಮ್ಮ ಜನ್ಮದಿನಾಚರಣೆ ಸಮಾರಂಭದಲ್ಲಿ ದೇಶದ ಭೂಪಟದ ಚಿತ್ರವಿರುವ ಕೇಕ್ ಕತ್ತರಿಸಿ ವಿವಾದಕ್ಕೀಡಾಗಿದ್ದಾರೆ.
ಭಾನುವಾರ ನಡೆದ ಪ್ರಧಾನಿಯ 69ನೇ ಜನ್ಮದಿನಾಚರಣೆಯಲ್ಲಿ ಅವರ ಪತ್ನಿ, ಆಪ್ತರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು. ಪ್ರಧಾನಿಯ ಸ್ವಗ್ರಾಮ ಪೂರ್ವ ನೇಪಾಳದ ಟೆರ್ಹಾತುಮ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇಶದ ಭೂಪಟದ ಚಿತ್ರವಿರುವ ಕೇಕ್ ಅನ್ನು ಕಠ್ಮಂಡುವಿನಿಂದ ಹೆಲಿಕಾಪ್ಟರ್ನಲ್ಲಿ ಸಮಾರಂಭಕ್ಕೆ ತರಲಾಗಿತ್ತು. ಕೇಕ್ ಕತ್ತರಿಸಿ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಹಂಚುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
‘ನೇಪಾಳದ ನಕ್ಷೆಯನ್ನು ಕೇಕ್ ರೂಪದಲ್ಲಿ ಕತ್ತರಿಸಿರುವುದು ಸರಿಯಲ್ಲ. ಇದುದೇಶವನ್ನು ವಿಭಜಿಸುವ ಉದ್ದೇಶವನ್ನು ಸೂಚಿಸುತ್ತದೆ’ ಎಂದು ಹಿರಿಯ ವಕೀಲ ದಿನೇಶ್ ತ್ರಿಪಾಠಿ ಅವರು, ಆನ್ಲೈನ್ ಪೋರ್ಟಲ್ ಹಮ್ರಾಕೂರ್.ಕಾಮ್ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಧಾನಿಯವರು ಕ್ಷಮೆ ಕೋರಬೇಕೆಂದು ಅವರು ಒತ್ತಾಯಿಸಿದ್ದಾರೆ.