ಬೆಂಗಳೂರು: ಕೋವಿಡ್ ಪಾಸಿಟಿವ್ ಆಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಯಲ್ಲೂ ತಮ್ಮ ದಿನಚರಿ ಬದಲಿಸಿಕೊಂಡಿಲ್ಲ. ಕಚೇರಿ ಕೆಲಸವನ್ನೂ ಅಲ್ಲಿಂದಲೇ ನಿರ್ವಹಿಸಿದರು.
ಬೆಳಿಗ್ಗೆ 6 ಗಂಟೆಗೆ ಎದ್ದು ಆಸ್ಪತ್ರೆಯ ಕೊಠಡಿಯಲ್ಲೇ ವಾಕ್ ಮಾಡಿದರು. ಬಳಿಕ ಪತ್ರಿಕೆಗಳನ್ನು ತರಿಸಿ ಓದಿದರು. ಮಧ್ಯಾಹ್ನದ ಬಳಿಕ ಕೆಲ ಸಮಯ ಪುಸ್ತಕ ಓದಿದರು. ಕೆಲ ಪ್ರಮುಖ ಕಡತಗಳನ್ನು ಪರಿಶೀಲಿಸಿ ಸಹಿ ಹಾಕಿದರು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಸುಂದರಕಾಂಡ, ಚಾಣಕ್ಯ, ಮಹಾಭಾರತ, ವಿವೇಕಾನಂದ ಕುರಿತ ಪುಸ್ತಕಗಳನ್ನು ಅವರು ಓದಲು ತರಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಅಧಿಕಾರಿಯೊಬ್ಬರು ತಿಳಿಸಿದರು. ಸೋಮವಾರವೂ ಕೆಲ ಕಡತಗಳನ್ನು ನೋಡಿದ್ದು, ದೂರವಾಣಿಯಲ್ಲಿ ಅಧಿಕಾರಿಗಳಿಂದ ವಿವರ ಪಡೆದರು.
ನರ್ಸ್ಗಳು ಅಥವಾ ವೈದ್ಯರ ಮೂಲಕ ವಾರ್ಡ್ಗೆ ಕಡತಗಳನ್ನು ತರಿಸಿಕೊಳ್ಳುತ್ತಾರೆ. ಪರಿಶೀಲನೆ ಬಳಿಕ ಕಡತವನ್ನು ಸ್ಯಾನಿಟೈಸ್ ಮಾಡಿ, ಬಿಸಿ ಮಾಡಿ 24 ಗಂಟೆಗಳ ಬಳಿಕ ಹಿಂದಿರುಗಿಸಲಾಗುತ್ತಿದೆ.ಕೊರೊನಾ ಸೇನಾನಿಗಳಿಗೆ ₹30 ಲಕ್ಷ ವಿಮೆ ಸಂಬಂಧಿತ ಕಡತಗಳಿಗೆ ಸಹಿ ಮಾಡಿದರು ಎಂದು ಅವರು ಹೇಳಿದರು.
ಎದುರಿನ ಕೊಠಡಿಯಲ್ಲೇ ಸಿದ್ದರಾಮಯ್ಯ: ಮಣಿಪಾಲ್ ಆಸ್ಪತ್ರೆಗೆದಾಖಲಾಗಿರುವ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಿ.ಎಂ ಅವರ ಕೊಠಡಿ ಎದುರಿನ ಕೊಠಡಿಯನ್ನೇ ನೀಡಲಾಗಿದೆ. ಉಭಯ ವೈದ್ಯ ಸಿಬ್ಬಂದಿಗಳಿಗಷ್ಟೇ ಪ್ರವೇಶವಿದೆ ಎಂದು ಮೂಲಗಳು ತಿಳಿಸಿವೆ.