ಬೀದರ್: ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಹಾಗೂ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಶಾಸಕರ ಅಂಗರಕ್ಷಕ, ಕಚೇರಿ ಸಹಾಯಕ, ವಿಧಾನ ಪರಿಷತ್ ಸದಸ್ಯರ ಕಚೇರಿ ಸಹಾಯಕರಿಗೂ ಸೋಂಕು ತಗುಲಿದೆ. ಇವರ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿಲ್ಲ. ಸಂಸದ ಭಗವಂತ ಖೂಬಾ ಅವರ ಕುಟುಂಬದ ಸದಸ್ಯರು, ಕಚೇರಿ ಸಹಾಯಕರು ಹಾಗೂ ಪೊಲೀಸ್ ಕಾನ್ಸ್ಟೆಬಲ್ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ.
ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಅವರ ಪತ್ನಿ, ಪುತ್ರ ಹಾಗೂ ಪುತ್ರಿಗೂ ಸೋಂಕು ತಗುಲಿದೆ. ನಾಲ್ಕು ದಿನಗಳ ಹಿಂದೆ ಇವರ ಮನೆ ಕೆಲಸದವರಿಗೆ ಸೋಂಕು ಬಂದಿತ್ತು ಎಂದು ಹೇಳಲಾಗುತ್ತಿದೆ. ಶೈಲೇಂದ್ರ ಅವರು ನಗರದೆಲ್ಲಡೆ ಸಂಚರಿಸಿದ್ದಾರೆ. ಅವರ ಸಂಪರ್ಕಕ್ಕೆ ಬಂದವರು ಸ್ವಯಂ ಪ್ರೇರಣೆಯಿಂದ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ ಅವರಿಗೆ ಸೋಂಕು ದೃಢಪಟ್ಟಿದೆ. ಒಂದು ವಾರದ ಹಿಂದೆ ಸಾಳೆ ಅವರ ಸಹೋದರಿ ಲಾತೂರ್ನಿಂದ ಬೀದರ್ಗೆ ಬಂದಿದ್ದರು. ಅವರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ ಸಾಳೆ ಕ್ವಾರಂಟೈನ್ನಲ್ಲಿ ಇದ್ದರು. ಗುರುವಾರ ಎರಡನೇ ಬಾರಿಗೆ ಗಂಟಲು ದ್ರವ ಮಾದರಿ ಪಡೆಯಲಾಗಿತ್ತು. ಶುಕ್ರವಾರ ವರದಿ ಪಾಸಿಟಿವ್ ಬಂದಿದೆ.