ಕಲಬುರ್ಗಿ: ನಾಲ್ಕು ಬಾರಿ ಲಾಕ್ಡೌನ್ ವಿಧಿಸಿಯೂ ವೈದ್ಯಕೀಯ ಮೂಲಸೌಕರ್ಯಗಳನ್ನು ಒದಗಿಸದ ರಾಜ್ಯ ಸರ್ಕಾರ ಕೊರೊನಾ ಸಂದರ್ಭದಲ್ಲಿ ಭ್ರಷ್ಟಾಚಾರದ ಸೋಂಕನ್ನು ಅಂಟಿಸಿಕೊಂಡಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಂಗಳೂರಿಗೆ ಎಂಟು ಜನ ಕೊರೊನಾ ಸಚಿವರಿದ್ದಾರೆ. ಆದರೆ ಕಲ್ಯಾಣ ಕರ್ನಾಟಕ ಸೇರಿದಂತೆ ಉಳಿದ ಭಾಗಕ್ಕೆ ಒಬ್ಬರೂ ಇಲ್ಲ. ನಿತ್ಯ ಐದು ನೂರಕ್ಕೂ ಅಧಿಕ ಜನರಲ್ಲಿ ಸೋಂಕು ಕಲಬುರ್ಗಿ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಅವರಲ್ಲಿ ತಕ್ಷಣ ಚಿಕಿತ್ಸೆಯ ಅವಶ್ಯಕತೆ ಇರುವವರಿಗೂ ಬೆಡ್ಗಳು ಸಾಲುತ್ತಿಲ್ಲ ಎಂದು ಟೀಕಿಸಿದರು.
ರಾಷ್ಟ್ರದಲ್ಲಿಯೇ ಮೊದಲ ಸಾವು ಸಂಭವಿಸಿರುವುದು ಕಲಬುರ್ಗಿ ನಗರದಲ್ಲಿಯೇ ಆದರೂ ಕೇವಲ ಒಂದೇ ಒಂದು ಕೊರೊನಾ ಸೋಂಕು ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ. ಈ ಮೊದಲು ಹಲವಾರು ಬಾರಿ ನಾನು ಇಎಸ್ಐಸಿನಲ್ಲಿ ಒಂದು ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಪತ್ರ ಬರೆದಿದ್ದೇನೆ. ಆದರೂ ಫಲಪ್ರದವಾಗಿಲ್ಲ ಹಾಗಾಗಿ ಇಲ್ಲಿಯವರೆಗೆ ಕನಿಷ್ಟ ಐದು ಸಾವಿರ ವರದಿಗಳು ಬಾಕಿ ಉಳಿದಿವೆ. ಇದು ತಕ್ಷಣದ ಚಿಕಿತ್ಸೆ ನೀಡಲು ಅಡ್ಡಗಾಲು ಆಗಿದೆ. ಇದು ಸರ್ಕಾರಕ್ಕೆ ಯಾಕೆ ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದರು.
ಜಿಮ್ಸ್ ಹಾಗೂ ಇಎಸ್ಐಸಿನಲ್ಲಿ ಎಷ್ಟು ಔಷಧಿ ಸಂಗ್ರಹಿಸಿಡಲಾಗಿದೆ ಎನ್ನುವ ಮಾಹಿತಿಯೂ ಯಾರು ಒದಗಿಸುತ್ತಿಲ್ಲ. ಮೂರು ಸಾವಿರಕ್ಕೆ ದೊರಕುವಂತ ಔಷಧಿ ಕಲಬುರಗಿ ಯಲ್ಲಿ ಲಭ್ಯವಿಲ್ಲದ ಕಾರಣ ಅದೇ ಔಷಧಿ ಸೊಲ್ಲಾಪುರದಲ್ಲಿ ಕಾಳಸಂತೆಯಲ್ಲಿ ಮೂರುಪಟ್ಟು ಹಣ ತೆತ್ತು ಸೋಂಕಿತರು ಖರೀದಿಸುತ್ತಿದ್ದಾರೆ ಎಂದರು.
ಕಲಬುರ್ಗಿಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದರಿಂದ ಕೋವಿಡ್ ಹಾಗೂ ನಾನ್ ಕೋವಿಡ್ ಬೆಡ್ ಗಳ ವಿವರಗಳ ಲಭ್ಯತೆಯಿಲ್ಲ. ಸಿಎಂ, ಡಿಸಿಎಂ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಸಾಲು ಸಾಲು ತೆಗೆದುಕೊಂಡರೂ ಸೂಕ್ತ ವೈದ್ಯಕೀಯ ಸೌಲಭ್ಯ ಕಲಬುರಗಿಯಲ್ಲಿ ಸಿಗುತ್ತಿಲ್ಲ. ಜಿಮ್ಸ್, ಇಎಸ್ ಐಸಿ, ಬಸವೇಶ್ವರ ಹಾಗೂ ಧನ್ವಂತರಿ ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸೋಂಕಿತರು ಅಲೆದಾಡಿ ಸಾಯುವಂತಾಗಿದೆ. ಮೊನ್ನೆ ನಡೆದ ಘಟನೆಯಲ್ಲಿ ಸೋಂಕಿತರೊಬ್ಬರು ಆಟೋದಲ್ಲಿ ಅಲೆದು ಸಾವನ್ನಪ್ಪಿದ್ದಕ್ಕೆ ಶವವನ್ನು ಡಿಸಿಕಚೇರಿಗೆ ತಂದ ಘಟನೆ ನಾಚಿಕೆಗೇಡು ಎಂದು ಶಾಸಕರು ಕುಟುಕಿದರು.
ಒಂದೇ ದಿನದಲ್ಲಿ ಎಂಟು ಜನ ಇಎಸ್ ಐ ಸಿನಲ್ಲಿ ಸಾವಿಗೀಡಾಗಿದ್ದಕ್ಕೆ ಸಾರ್ವಜನಿಕರ ಹಿತದೃಷ್ಟಿಯಿಂದ ಮಾನವೀಯತೆ ದೃಷ್ಟಿಯಿಂದ ಪ್ರಶ್ನೆ ಮಾಡಿದ್ದಕ್ಕೆ ತಮ್ಮ ಲೋಪವನ್ನು ಒಪ್ಪಿಕೊಳ್ಳದೆ ರಾಜಕೀಯ ಮಾಡುತ್ತಿದ್ದಾರೆ ಎನ್ನುತ್ತಾರೆ. ಅಲ್ಲಿ ಏನು ತಪ್ಪು ನಡೆಯದೇ ಇದ್ದರೆ ತನಿಖೆ ಸಮಿತಿ ರಚನೆ ಮಾಡಿದ್ದು ಯಾಕೆ? ಇಎಸ್ ಐ ಸಿ ಡೀನ್ ವರ್ಗಾವಣೆ ಮಾಡಿದ್ದು ಯಾಕೆ? ಆಕ್ಸಿಜನ್ ಸಿಗದೆ ಮಹಿಳೆಯೊಬ್ಬರು ತೀರಿಕೊಂಡಿದ್ದಕ್ಕೆ ಆಕೆಯ ಮಗ ವಸ್ತುಸ್ಥಿತಿ ತಿಳಿಸಿ ವಿಡಿಯೊ ಮಾಡಿದ್ದಕ್ಕೆ ಅದನ್ನೂ ನಂಬುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊವೀಡ್ ಸಾವುಗಳನ್ನು ಮುಚ್ಚಿಡುವ ವ್ಯವಸ್ಥೆ ನಡೆಯುತ್ತಿದೆ. ಸೋಂಕಿತರೊಬ್ಬರು ಹೃದಯ ಸಂಬಂಧಿ ಕಾಯಿಲೆ ಇದ್ದು ತೀರಿಕೊಂಡರೆ ಅಂತಹ ಸಾವುಗಳನ್ನು ಕೋವಿಡ್ ಸಾವು ಎಂದು ಹೇಳದೆ ಹೃದಯಾಘಾತದಿಂದಾದ ಸಾವು ಎಂದು ಹೇಳಿ ಜನರ ದಾರಿ ತಪ್ಪಿಸಲಾಗುತ್ತಿದೆ.
ಸರ್ಕಾರದಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ ಅವರು ಹೇಳಿದರೆ, ಬಿಜೆಪಿ ಕಾರ್ಯದರ್ಶಿ ರವಿಕುಮಾರ ಲೀಗಲ್ ನೋಟಿಸ್ ಕಳಿಸಿದ್ದಾರೆ. ಅವರಿಗೆ ಯಾವ ಅಧಿಕಾರ ಇದೆ? ಸರ್ಕಾರದ ಪರವಾಗಿ ಯಾರಾದರೂ ನೀಡಿದ್ದರೆ ಅದು ಸರಿ. ಅಂತಹ ನೋಟಿಸುಗಳಿಗೆ ಯಾವ ಮೌಲ್ಯವಿದೆ ಎಂದು ತಿಳಿದಿದೆ. ಅದನ್ನು ನಾವೂ ಸಮರ್ಥವಾಗಿ ಎದುರಿಸುತ್ತೇವೆ ಎಂದರು.
ರಾಜ್ಯದಲ್ಲಿರುವ ಸರ್ಕಾರ ಏನು ಮಾಡುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಕೋಟಿಕೋಟಿ ಖರ್ಚು ಮಾಡಿ ತಿರುಪತಿಯಲ್ಲಿ ಕಲ್ಯಾಣ ಮಂಟಪ, ಪ್ರತಿಮೆ ನಿರ್ಮಾಣ ಮಾಡಲು, ಸರ್ಕಾರದ ಸಾಧನೆ ಬಿಂಬಿಸಲು ಖರ್ಚು ಮಾಡಲು ಕೋಟಿಕೋಟಿ ದುಡ್ಡಿದೆ. ಕೊರೋನಾ ವಾರಿಯರ್ಸ್ ಗೆ ಮೂಲಭೂತ ಸೌಲಭ್ಯ ಒದಗಿಸುವ ನೆಪದಲ್ಲಿ ಲೂಟಿ ಮಾಡಲು ಹಣವಿದೆ ಆದರೆ ರಾಜ್ಯ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ ಸೌಲಭ್ಯ ಒದಗಿಸಲು ದುಡ್ಡಿಲ್ಲ. ನಾವು ಸರ್ಕಾರಕ್ಕೆ ಸಹಕಾರ ನೀಡಿದ್ದೇವೆ. ಆದರೆ ಭ್ರಷ್ಟಚಾರಕ್ಕೆ ಸಹಕಾರ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಸೋಂಕಿತರಿಗೆ ಬೇಕಾದ ಔಷಧಿ ಸೌಲಭ್ಯ, ಬೆಡ್ ವ್ಯವಸ್ಥೆ ಮಾಡಬೇಕು, ಟೆಸ್ಟಿಂಗ್ ಸೆಂಟರ್ ಸ್ಥಾಪನೆ ಮಾಡಬೇಕು, ಜಿಮ್ಸ್ ಹಾಗೂ ಇಎಸ್ ಐ ಸಿ ನಲ್ಲಿ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಸಂಸದರು ಸುಮ್ಮನೆ ಫೋಟೋ ತೆಗೆದುಕೊಂಡು ಮಾನವೀಯತೆ ಮೆರೆಯುವ ಜೊತೆಗೆ ಈ ಕಡೆಗೂ ಸ್ವಲ್ಪ ಗಮನಿಸಲಿ ಎಂದು ಪ್ರಿಯಾಂಕ್ ಕುಟುಕಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಡಾ ಕಿರಣ್ ದೇಶಮಖ್, ಈರಣ್ಣ ಝಳಕಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.