ಬೆಂಗಳೂರು: ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ಯುವತಿಯೊಬ್ಬರನ್ನು ಅವರ ಸ್ನೇಹಿತನೇ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿ ರೌಡಿ ಅಭಿಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ ನಗರದಲ್ಲಿ ಯುವತಿ ವಾಸವಿದ್ದರು. ಒಂದು ಕೈಯಲ್ಲಿ ಚಾಕು ಒಂದು ಕೈಯಲ್ಲಿ ತಾಳಿ ಹಿಡಿದು ಯುವತಿ ಮನೆ ಬಳಿ ಹೋಗಿದ್ದ ಆರೋಪಿ, ಮದುವೆ ಆಗುವಂತೆ ಪೀಡಿಸಿದ್ದ.
ನಂತರ ಯುವತಿಯನ್ನು ಅಪಹರಿಸಿ ಗಿರಿನಗರಕ್ಕೆ ಸ್ನೇಹಿತರ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿಯೇ ಯುವತಿಗೆ ತಾಳಿ ಕಟ್ಟಲು ಮುಂದಾಗಿದ್ದ. ಅದಕ್ಕೆ ಯುವತಿ ವಿರೋಧಿಸಿದ್ದಳು. ಅವಾಗಲೇ ಚಾಕುವಿನಿಂದ ಇರಿದು ಕೊಂದಿದ್ದಾನೆ.
'ಯುವತಿ ಹಾಗೂ ಆರೋಪಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಗೊತ್ತಾಗಿದೆ. ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ' ಎಂದು ಪೊಲೀಸರು ತಿಳಿಸಿದರು.