ಚನ್ನಗಿರಿ: ‘ಭಾರತ ಇಂದು ಹಿಂದೂಗಳ ದೇಶ ಎಂದು ಹೆಸರು ಪಡೆದುಕೊಂಡಿರುವುದಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಹಿಂದೂ ಧರ್ಮ ಸ್ಥಾಪನೆ ಮಾಡದೇ ಇದ್ದರೆ ಈ ದೇಶ ಹಿಂದೂಸ್ತಾನ ಎಂಬ ಹೆಸರನ್ನು ಪಡೆದುಕೊಳ್ಳುತ್ತಿರಲಿಲ್ಲ. ಶಿವಾಜಿ ಅಪ್ರತಿಮ ಹೋರಾಟಗಾರರಾಗಿದ್ದರು’ ಎಂದು ಶಾಸಕ ವಡ್ನಾಳ್ ರಾಜಣ್ಣ ತಿಳಿಸಿದರು.
ತಾಲ್ಲೂಕು ಆಡಳಿತ, ಕ್ಷತ್ರಿಯ ಮರಾಠ ಸಮಾಜ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ ಸೋಮವಾರ ನಡೆದ ಶಿವಾಜಿ ಮಹಾರಾಜರ 391ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಕ್ಷತ್ರಿಯ ಮರಾಠ ಸಮುದಾಯ ಭವನದ ಕಾಮಗಾರಿಗೆ ನನ್ನ ಅನುದಾನದಲ್ಲಿ ₹ 10 ಲಕ್ಷ ಮಂಜೂರು ಮಾಡಿದ್ದೇನೆ. ಅದೇ ರೀತಿ ಹೊದಿಗೆರೆ ಗ್ರಾಮದಲ್ಲಿ ಇರುವ ಶಿವಾಜಿ ಮಹಾರಾಜರ ತಂದೆ ಷಹಾಜೀ ರಾಜೇ ಭೋಂಸ್ಲೆ ಸಮಾಧಿ ಸ್ಥಳದ ಅಭಿವೃದ್ಧಿಗೆ ₹ 2 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಈ ಸಮಾಜದವರು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿಲ್ಲ ಎಂದರು.
ಪುರಸಭೆ ಅಧ್ಯಕ್ಷೆ ಶಿವರತ್ನಮ್ಮ, ಸದಸ್ಯರಾದ ಆರ್.ಮಾಲತೇಶ್, ಶಿವಾಜಿರಾವ್, ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ್ ಪವಾರ್, ಮರಾಠ ಸಮಾಜದ ಗೌರವಾಧ್ಯಕ್ಷ ಸುಬ್ಬೋಜಿರಾವ್, ಅಧ್ಯಕ್ಷ ನಿಂಗೋಜಿರಾವ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಜಿ.ಪಿ. ರವಿಕುಮಾರ್, ತಾಲ್ಲೂಕು ಪಂಚಾಯ್ತಿ ಇಒ ಎಂ.ಆರ್. ಪ್ರಕಾಶ್, ತಹಶೀಲ್ದಾರ್ ಎಸ್. ಪದ್ಮಕುಮಾರಿ ಉಪಸ್ಥಿತರಿದ್ದರು. ಶಿವಮೊಗ್ಗ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಡಾ.ದಿಲೀಪ್ ಕುಮಾರ್ ಪಾಂಡೆ ಉಪನ್ಯಾಸ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.