ನವದೆಹಲಿ: ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ನರೇಂದ್ರ ಮೋದಿ ಅವರು ಗುರುವಾರ ಬೆಳಗ್ಗೆ ಮಹಾತ್ಮ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.
ಬಳಿಕ ಇಂಡಿಯಾ ಗೇಟ್ ಬಳಿ ಇರುವರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ಭೇಟಿ ನೀಡಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಹಲವು ಹಿರಿಯ ನಾಯಕರು ಸಹ ಮೋದಿ ಜತೆಗಿದ್ದರು.
ನಂತರ ಮೋದಿ ಸರಣಿ ಟ್ವೀಟ್ಗಳನ್ನು ಮಾಡಿದ್ದು,‘ಈ ವರ್ಷ ನಾವು ಬಾಪು ಅವರ 150ನೇ ಜಯಂತಿ ಆಚರಿಸುತ್ತಿದ್ದೇವೆ. ಅವರ ಉದಾತ್ತ ಆದರ್ಶಗಳು ಈ ವೇಳೆ ಮತ್ತಷ್ಟು ಪ್ರಚುರವಾಗಲಿ. ಬಡವರು, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ದುಡಿಯಲು ನಮಗೆ ಮತ್ತಷ್ಟು ಸ್ಫೂರ್ತಿ ನೀಡಲಿ’ ಎಂದು ಹೇಳಿದ್ದಾರೆ.
‘ಜನರಿಗೆ ಸೇವೆ ಸಲ್ಲಿಸಲುಬಿಜೆಪಿಗೆ ಇಷ್ಟು ದೊಡ್ಡ ಮಟ್ಟದ ಅವಕಾಶ ದೊರಕಿದ್ದನ್ನು ನೋಡಿದ್ದರೆ ವಾಜಪೇಯಿ ಹೆಚ್ಚು ಸಂತೋಷ ಪಡುತ್ತಿದ್ದರು. ಅಟಲ್ ಜೀ ಅವರ ಜೀವನ ಮತ್ತು ಕೆಲಸಗಳಿಂದ ಪ್ರೇರಣೆಗೊಂಡಿದ್ದೇವೆ. ಇನ್ನಷ್ಟು ಉತ್ತಮ ಆಡಳಿತ ನೀಡಲುಶ್ರಮಿಸುತ್ತೇವೆ’ ಎಂದು ಮೋದಿ ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
**
ದೇಶದ ಏಕತೆ, ಸಾರ್ವಭೌಮತ್ವ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ. ಭದ್ರತೆ ನಮ್ಮ ಆದ್ಯತೆ –ನರೇಂದ್ರ ಮೋದಿ, ಪ್ರಧಾನಿ