ನವದೆಹಲಿ: ಪ್ರಸಿದ್ಧ ಯಾತ್ರಾಸ್ಥಳ ಉತ್ತರಾಖಂಡದ ಬದರಿನಾಥ ದೇಗುಲದ ಬಾಗಿಲನ್ನು ಇಂದು ಮುಂಜಾನೆ 4.30ಕ್ಕೆ ತೆರೆಯಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮುಖ್ಯ ಅರ್ಚಕ ಸೇರಿದಂತೆ 28ಜನರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಭಕ್ತಾಧಿಗಳಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ. ಕೋವಿಡ್–19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಜೋಶಿಮಠದ ಉಪ ವಿಭಾಗೀಯ ಅಧಿಕಾರಿ ಅನಿಲ್ ಚನ್ಯಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
#WATCH Uttarakhand: The portals of Badrinath Temple opened at 4:30 am today. 28 people including the Chief Priest was present at the temple when its portals opened. (Video Source: ITBP) pic.twitter.com/Yr6pamv7Kk
ಆರು ತಿಂಗಳ ಚಳಿಗಾಲದ ವಿರಾಮದ ನಂತರ ಏಪ್ರಿಲ್ 29ರಂದು ಕೇದಾರನಾಥ ದೇವಾಲಯದ ದ್ವಾರಗಳನ್ನು ತೆರೆಯಲಾಗಿತ್ತು. ಆದರೆ, ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆ ಯಾತ್ರಾರ್ಥಿಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು.
ಇಂದು ಬದರಿನಾಥ ದೇವಾಲಯವನ್ನು ತೆರೆಯಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದರು. ದೇವಾಲಯ ಮುಚ್ಚಿದ ಕಾರಣ ವಾರ್ಷಿಕ ಪಂಚಮುಖಿ ಯಾತ್ರೆಯನ್ನು ಯಾತ್ರಿಕರಿಲ್ಲದೆ ನಡೆಸಲಾಯಿತು.
ಚಾರ್ ಧಾಮ್ ತೀರ್ಥಯಾತ್ರೆಯ ಒಂದು ಭಾಗವಾಗಿರುವ ಈ ಯಾತ್ರೆಯನ್ನು ಸಾಮಾನ್ಯವಾಗಿ ಪ್ರತಿವರ್ಷ 1,000 ಕ್ಕೂ ಹೆಚ್ಚು ಯಾತ್ರಾರ್ಥಿಗಳೊಂದಿಗೆ ಸೇನೆಯ ಬೆಟಾಲಿಯನ್ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು.ಆದರೆ, ಲಾಕ್ಡೌನ್ ಹಿನ್ನೆಲೆ ಕೇವಲ ಐದು ಮಂದಿಯಾತ್ರೆ ನೆರವೇರಿಲಾಯಿತು.