ಪಟ್ನಾ: ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣಕ್ಕಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ದಂಪತಿಗೆ ಮತದಾನದ ಹಕ್ಕು ನಿರಾಕರಿಸಬೇಕು ಎಂದು ಕೇಂದ್ರ ಪಶುಸಂಗೋಪನೆ ಸಚಿವ ಗಿರಿರಾಜ್ಸಿಂಗ್ ಹೇಳಿದ್ದಾರೆ.
‘ಎಲ್ಲ ಸಮುದಾಯದವರಿಗೂ ಇದು ಅನ್ವಯವಾಗಬೇಕು. ಯಾವುದೇ ಧಾರ್ಮಿಕ ಗುಂಪುಗಳಿಗೂ ವಿನಾಯಿತಿ ನೀಡಬಾರದು’ ಎಂದಿದ್ದಾರೆ.
1947ರಿಂದ 2019ರವರೆಗೆ ಜನಸಂಖ್ಯೆ ಏರಿಕೆಯಾಗಿರುವ ಅಂಕಿ–ಅಂಶಗಳ ಮಾಹಿತಿಯನ್ನು ಅವರು ವಿಶ್ವ ಜನಸಂಖ್ಯಾ ದಿನವಾದ ಗುರುವಾರ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.
‘ಜನಸಂಖ್ಯಾ ಸ್ಫೋಟವು ದೇಶದ ಆರ್ಥಿಕತೆಯ ಅಸಮತೋಲನಕ್ಕೆ ಕಾರಣವಾಗುತ್ತಿದೆ ಮತ್ತು ಸಾಮಾಜಿಕ ಸಾಮರಸ್ಯಕ್ಕೂ ಧಕ್ಕೆ ತರುತ್ತಿದೆ. ಧಾರ್ಮಿಕ ಅಡೆತಡೆಗಳೇ ಇದಕ್ಕೆ ಕಾರಣ’ ಎಂದು ಮುಸ್ಲಿಮರನ್ನು ಗುರಿಯಾಗಿಸಿ ಸಚಿವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
’1947ರಲ್ಲಿ ನಡೆದಂತೆ ಇನ್ನೊಂದು ‘ಸಾಂಸ್ಕೃತಿಕ ವಿಭಜನೆ’ಯತ್ತ ಭಾರತ ಸಾಗುತ್ತಿದೆ. ಜನನ ನಿಯಂತ್ರಣ ಕಾನೂನು ರೂಪಿಸಲು ಎಲ್ಲ ರಾಜಕೀಯ ಪಕ್ಷಗಳು ಮುಂದೆ ಬರಬೇಕು’ ಎಂದೂ ತಿಳಿಸಿದ್ದಾರೆ.
ಗಿರಿರಾಜ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರದ ಆರ್ಜೆಡಿ ಅಧ್ಯಕ್ಷ ರಾಮ್ ಚಂದ್ರ ಪುರ್ಬೆ ’ಇದು ಚಿಲ್ಲರೆ ರಾಜಕೀಯ’ ಎಂದಿದ್ದಾರೆ.
‘ಸಚಿವರಿಗೆ ಇಂತಹ ಆಲೋಚನೆಗಳು ಎಲ್ಲಿಂದ ಬರುತ್ತವೆ? ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಂದ ಮತದಾನದ ಹಕ್ಕು ಕಸಿಯುವ ಬಗ್ಗೆ ಸಂವಿಧಾನ ಹೇಳಿದೆಯೇ?’ ಎಂದು ಬಿಹಾರದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪ್ರೇಮ್ ಚಂದ್ರ ಮಿಶ್ರಾ ಹೇಳಿದ್ದಾರೆ.