ನವದೆಹಲಿ: ವಿದು ವಿನೋದ್ ಚೋಪ್ರಾ ನಿರ್ದೇಶನದ 'ಶಿಕಾರಾ: ದಿ ಅನ್ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರಿ ಪಂಡಿತ್ಸ್' ಸಿನಿಮಾ ನೋಡುವಾಗ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಕಣ್ಣೀರುಹಾಕಿರುವ ಘಟನೆ ನಡೆದಿದೆ.
'ಶಿಕಾರಾ' ಸಿನಿಮಾದ ವಿಶೇಷ ಪ್ರದರ್ಶನವನ್ನು ವಿದು ವಿನೋದ್ ಚೋಪ್ರಾ ಫಿಲ್ಮ್ಸ್ ಆಯೋಜಿಸಿತ್ತು. ಈ ವೇಳೆ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರು ಸಿನಿಮಾ ವೀಕ್ಷಿಸಲು ತಮ್ಮ ಪುತ್ರಿಯೊಂದಿಗೆ ಬಂದಿದ್ದರು.
ವಿದು ಚೋಪ್ರಾ ಅವರೇ ಶೇರ್ ಮಾಡಿರುವ ವಿಡಿಯೊ ಕ್ಲಿಪ್ನಲ್ಲಿ, ಸಿನಿಮಾ ನೋಡುತ್ತಿದ್ದ ಅಡ್ವಾಣಿಯವರು ಚಿತ್ರದ ಕೊನೆಯಲ್ಲಿ ಭಾವುಕರಾಗಿಕಣ್ಣೀರುಹಾಕುತ್ತಾರೆ. ಈ ವೇಳೆ ವಿದು ಚೋಪ್ರಾ ಅವರನ್ನು ಸಮಾಧಾನಪಡಿಸಲು ಮುಂದಾಗುತ್ತಾರೆ. ಸುತ್ತಲೂ ಇದ್ದ ಜನರು ಕೂಡ ಸಿನಿಮಾ ವೀಕ್ಷಿಸುತ್ತಾ ಭಾವುಕರಾಗಿ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತಾರೆ.
'ಗಣ್ಯರಿಗಾಗಿ ಆಯೋಜಿಸಿದ್ದ ಶಿಕಾರಾ ವಿಶೇಷ ಪ್ರದರ್ಶನದಲ್ಲಿ ಅಡ್ವಾಣಿ ಅವರು ಸಿನಿಮಾ ನೋಡಿದ್ದಾರೆ. ನಿಮ್ಮ ಆಶೀರ್ವಾದ ಮತ್ತು ಚಿತ್ರದ ಬಗೆಗಿನ ಮೆಚ್ಚುಗೆಗೆ ನಾವು ಕೃತಜ್ಞರಾಗಿರುತ್ತೇವೆ ಸರ್ ಎಂದು ಬರೆದುಕೊಂಡಿರುವ ಅವರು, ಸಿನಿಮಾ ನೋಡಿದ ನಂತರ ಅಡ್ವಾಣಿ ಅವರಿಂದ ಉಕ್ಕಿಬಂದ ಕಣ್ಣೀರನ್ನು ತಡೆಯಲು ಆಗಲಿಲ್ಲ' ಎಂದು ಹೇಳಿದ್ದಾರೆ.
ದಂಗೆಯ ಹಿನ್ನೆಲೆಯಲ್ಲಿ1990ರ ಆರಂಭದಲ್ಲಿ ವಲಸೆ ಹೋಗಲು ಕಾಶ್ಮೀರಿ ಪಂಡಿತರನ್ನು ಹೇಗೆ ಒತ್ತಾಯಿಸಲಾಯಿತು ಎನ್ನುವ ಕುರಿತಾದ ನೈಜ ಘಟನೆಯನ್ನು ಶಿಕಾರಾ ಸಿನಿಮಾ ಒಳಗೊಂಡಿದೆ. ಬಳಿಕ ಕಾಶ್ಮೀರಿ ಪಂಡಿತರು ತಮ್ಮ ಜೀವನವನ್ನು ಹೇಗೆ ಪುನರ್ ನಿರ್ಮಿಸಿಕೊಂಡರು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಆಲಿದ್ ಖಾನ್ ಮತ್ತು ಸಾದಿಯಾ ಅಭಿನಯದ ಶಿಕಾರಾ, ಫೆಬ್ರುವರಿ 7ರಂದು ದೇಶಾದ್ಯಂತ ತೆರೆಕಂಡಿದ್ದು, ಬಾಲಿವುಡ್ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.