ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ಸಂಸದೆಗೆ ಭಾರತ ಪ್ರವೇಶ ಇಲ್ಲ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ಟೀಕಿಸಿದ್ದ ಡೆಬ್ಬಿ ಅಬ್ರಹಾಮ್ಸ್‌
Last Updated 17 ಫೆಬ್ರುವರಿ 2020, 19:44 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮಿರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕ್ರಮವನ್ನು ಟೀಕಿಸಿದ್ದ ಬ್ರಿಟನ್‌ ಸಂಸದೆ ಡೆಬ್ಬಿ ಅಬ್ರಹಾಮ್ಸ್‌ ಅವರಿಗೆ ಭಾರತ ಪ್ರವೇಶ ನಿರಾಕರಿಸಲಾಗಿದೆ.

ದುಬೈನಿಂದ ಬಂದಿದ್ದ ಅವರನ್ನು ಮತ್ತೆ ಅಲ್ಲಿಗೆ ವಾಪಸ್‌ ಕಳುಹಿಸಲಾಗಿದೆ. ಅಬ್ರಹಾಮ್ಸ್‌ ಅವರು ಮಾನ್ಯತೆ ಪಡೆದ ವೀಸಾ ಹೊಂದಿರದ ಕಾರಣ ಭಾರತಕ್ಕೆ ಪ್ರವೇಶ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೇಬರ್‌ ಪಕ್ಷದ ಸಂಸದೆ ಅಬ್ರಹಾಮ್ಸ್‌ ಅವರು ಕಾಶ್ಮೀರಕ್ಕೆ ತೆರಳುವ ಸಂಸತ್‌ ಸದಸ್ಯರ ತಂಡದ ಅಧ್ಯಕ್ಷರೂ ಆಗಿದ್ದಾರೆ. ದುಬೈನಿಂದ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9ಕ್ಕೆ, ಭಾರತದ ಹರ್‌ಪ್ರೀತ್‌ ಉಪಲ್‌ ಜೊತೆಗೆ ಅವರು ಬಂದಿಳಿದರು.

ಭಾರತಕ್ಕೆ ಬರುವ ಮೊದಲೇ ಅವರ ಇ–ವೀಸಾ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿತ್ತು. ಆದರೂ, ಅವರು ಭಾರತಕ್ಕೆ ಬಂದಿದ್ದಾರೆ ಎಂದು ತಿಳಿಸಿರುವ ಗೃಹ ಸಚಿವಾಲಯದ ಅಧಿಕಾರಿಗಳು, ಇ–ವೀಸಾ ರದ್ದತಿಗೆ ಯಾವುದೇ ಕಾರಣವನ್ನು ತಿಳಿಸಿಲ್ಲ.

ಅಬ್ರಹಾಮ್ಸ್‌ ಅವರಿಗೆ ಕಳೆದ ಅಕ್ಟೋಬರ್‌ನಲ್ಲಿ ಇ–ವೀಸಾ ನೀಡಲಾಗಿತ್ತು. ಇದರ ಅವಧಿ 2020ರ ಅಕ್ಟೋಬರ್‌ವರೆಗೆ ಇತ್ತು.

‘ಫೆಬ್ರುವರಿ 13ರವರೆಗೆ ಯಾವುದೇ ಇ–ಮೇಲ್‌ ನನಗೆ ಬಂದಿರಲಿಲ್ಲ. ಬಳಿಕ, ನಾನು ಪ್ರವಾಸ ಕೈಗೊಂಡಿದ್ದೇನೆ. ನನಗೆ ಭಾರತದಲ್ಲಿ ಸಂಬಂಧಿಕರು ಇದ್ದಾರೆ. ನನ್ನೊಂದಿಗೆ ಭಾರತದ ಸಿಬ್ಬಂದಿ ಸಹ ಇದ್ದಾರೆ. ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಈ ವಿಷಯದಲ್ಲಿ ನಮ್ಮ ಹಾಗೂ ಇತರೆ ದೇಶಗಳ ಸರ್ಕಾರಗಳನ್ನೂ ಪ್ರಶ್ನಿಸುತ್ತೇನೆ, ಇದು ಮುಂದುವರಿಯಲಿದೆ’ ಎಂದು ಅಬ್ರಹಾಮ್ಸ್‌ ತಿಳಿಸಿದ್ದಾರೆ.

‘ವಲಸೆ ಅಧಿಕಾರಿಗಳಿಗೆ ಇ–ವೀಸಾ ಸೇರಿದಂತೆ ಎಲ್ಲ ದಾಖಲೆಗಳನ್ನು ತೋರಿಸಲಾಗಿತ್ತು. ನನ್ನ ಭಾವಚಿತ್ರವನ್ನು ಸಹ ಅವರು ಸೆರೆ ಹಿಡಿದಿದ್ದಾರೆ. ನಂತರ ನನ್ನ ಇ–ವೀಸಾ ತಿರಸ್ಕರಿಸಲಾಗಿದೆ ಎಂದು ಹೇಳಿದ ಅಧಿಕಾರಿಯು, 10 ನಿಮಿಷಗಳವರೆಗೆ ಅಲ್ಲಿಂದ ತೆರಳಿದ್ದರು. ಮರಳಿ ಬಂದ ನಂತರ ಅಸಭ್ಯವಾಗಿ ಮತ್ತು ಆಕ್ರಮಣಕಾರಿಯಾಗಿ ನಡೆದುಕೊಂಡರು. ನಂತರ ನನ್ನನ್ನು ನಿಲ್ದಾಣದ ಬೇರೆ ಕಡೆಗೆ ಕರೆದುಕೊಂಡು ಹೋಗಿ ಕೂಡುವಂತೆ ಆದೇಶಿಸಿದರು. ಜನರು ಈ ಎಲ್ಲ ಬೆಳವಣಿಗೆಗಳನ್ನು ನೋಡಲಿ ಎಂಬ ಉದ್ದೇಶದಿಂದ ಈ ಆದೇಶವನ್ನು ತಿರಸ್ಕರಿಸಿದೆ’ ಎಂದು ಅವರು ತಿಳಿಸಿದ್ದಾರೆ.

ಬ್ರಿಟನ್‌ ಹೈಕಮಿಷನರ್‌ ಜೊತೆಗೆ ಸಂಪರ್ಕ ಹೊಂದಿರುವ ತಮ್ಮ ಸೋದರ ಸಂಬಂಧಿಗೆ ಅವರು ಕರೆ ಮಾಡಿದರು. ‘ವೀಸಾವನ್ನು ರದ್ದುಪಡಿಸಿದ್ದು ಏತಕ್ಕಾಗಿ ಹಾಗೂ ಮರಳಿ ಬಂದ ನಂತರ ವೀಸಾ ಪಡೆಯಬಹುದೇ ಎಂಬುದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ಆದರೆ, ಯಾರಿಗೂ ಯಾವುದೇ ಮಾಹಿತಿ ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

‘ನನ್ನ ಮೇಲೆ ನಿಗಾ ವಹಿಸಿರುವ ಅಧಿಕಾರಿಗೂ ಯಾವುದೇ ಮಾಹಿತಿ ಇಲ್ಲ. ನನ್ನನ್ನು ಅಪರಾಧಿಯಂತೆ ಪರಿಗಣಿಸಲಾಗಿದೆ ಎಂಬ ಅಂಶವನ್ನು ನನ್ನ ಹೇಳಿಕೆಯಿಂದ ಹಿಂಪಡೆಯಲು ಸಿದ್ಧವಿದ್ದೇನೆ. ನನ್ನ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಅಬ್ರಾಹಮ್ಸ್‌ ತಿಳಿಸಿದ್ದಾರೆ.

ಅಬ್ರಹಾಮ್ಸ್‌ ಅವರು 370ನೇ ವಿಧಿ ರದ್ದು ಮಾಡಿದ ಕ್ರಮಕ್ಕೆ ‘ಕಾಶ್ಮೀರದ ಜನರ ನಂಬಿಕೆಗೆ ದ್ರೋಹ’ ಮಾಡಿದಂತಾಗಿದೆ ಎಂದು ಟೀಕಿಸಿದ್ದರು. ಎರಡು ದಿನಗಳ ಕಾಲ ಅವರು ಭಾರತದಲ್ಲಿ ಪ್ರವಾಸ ಕೈಗೊಳ್ಳಲಿದ್ದರು.

ಸರ್ಕಾರ ಏಕೆ ಹೆದರುತ್ತಿದೆ: ತರೂರ್‌
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು, ‘ಈ ಕ್ರಮವು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಹಾಗಾದರೆ, ಟೀಕಾಕಾರರಿಗೆ ಏಕೆ ಹೆದರುತ್ತಿದೆ? ಅಲ್ಲಿನ ಪರಿಸ್ಥಿತಿ ಉತ್ತಮವಿದ್ದರೆ, ಟೀಕೆ ಮಾಡುವವರಿಗೆ ಸ್ವತಃ ಅಲ್ಲಿಗೆ ಭೇಟಿ ನೀಡಲು ಸರ್ಕಾರ ಪ್ರೋತ್ಸಾಹಿಸಬಾರದೇಕೆ?’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT