ಪಣಜಿ: ಲಾಕ್ಡೌನ್ ಸಂದರ್ಭದಲ್ಲಿ ಸಾರಿಗೆ ಸಂಚಾರಕ್ಕೆ ಅವಕಾಶ ಇಲ್ಲದ ಕಾರಣ ಕರ್ನಾಟಕದಲ್ಲಿ ಸಿಲುಕಿಕೊಂಡಿದ್ದ 241 ಬೌದ್ಧ ಭಿಕ್ಕುಗಳನ್ನು ಅವರ ತಾಯ್ನಾಡಾದ ಮಂಗೋಲಿಯಾಕ್ಕೆ ಗೋವಾದಿಂದ ವಿಶೇಷ ವಿಮಾನದ ಮೂಲಕ ಕಳುಹಿಸಲಾಯಿತು ಎಂದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ವಿಮಾನವು ದಾಬೊಲಿಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ಪ್ರಯಾಣ ಬೆಳೆಸಿತು ಎಂದು ಗೋವಾ ವಿಮಾನ ನಿಲ್ದಾಣದ ನಿರ್ದೇಶಕ ಗಗನ್ ಮಲಿಕ್ ತಿಳಿಸಿದ್ದಾರೆ.
ಬೌದ್ಧ ಭಿಕ್ಕುಗಳು ಕರ್ನಾಟಕದ ಹುಬ್ಬಳ್ಳಿಯಲ್ಲಿ ಸಿಲುಕಿದ್ದರು. ಅವರನ್ನು ರಸ್ತೆ ಮೂಲಕ ಗೋವಾಕ್ಕೆ ಕರೆತರಲಾಗಿತ್ತು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಬೌದ್ಧ ಭಿಕ್ಕುಗಳನ್ನು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಲು ಮಂಗೋಲಿಯನ್ ಏರ್ಲೈನ್ಸ್ನ ವಿಮಾನ ಗೋವಾಕ್ಕೆ ಬಂದಿತ್ತು. ವಿಮಾನ ಹೊರಡುವ ಸಂದರ್ಭದಲ್ಲಿ ಪ್ರಯಾಣಿಕರ ನಡುವೆ ಪರಸ್ಪರ ಅಂತರ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಯಿತು ಎಂದು ಅವರು ವಿವರಿಸಿದ್ದಾರೆ.
ದೇಶದಾದ್ಯಂತ ಲಾಕ್ಡೌನ್ ಜಾರಿಯಾದ ಬಳಿಕ ಗೋವಾದಿಂದ ಸಂಚರಿಸಿದ 41ನೇ ವಿಮಾನ ಇದಾಗಿದೆ ಎಂದು ಮಲಿಕ್ ತಿಳಿಸಿದರು.ಇದಕ್ಕೂ ಮುನ್ನ ರಷ್ಯಾ, ಬ್ರಿಟನ್ ಸೇರಿದಂತೆ ಇತರ ದೇಶಗಳ ವಿಮಾನಗಳು ತಮ್ಮ ನಾಗರಿಕರನ್ನು ಕರೆದೊಯ್ದಿದ್ದವು ಎಂದು ಅವರು ಮಾಹಿತಿ ನೀಡಿದರು.