ಶ್ರೀನಗರ:ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ದೇಶದ ಗಮನ ಸೆಳೆಯಲುಯುವ ಕ್ರಾಂತಿ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಯುವ ಘಟಕ, ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ಲಾಲ್ ಚೌಕ್ನಲ್ಲಿ ರಾಷ್ಟ್ರ ಧ್ವಜ ಹಾರಿಸಲು ಯೋಜಿಸಿದೆ.
ಭಾರತೀಯ ಯುವ ಕಾಂಗ್ರೆಸ್ ಘಟಕದ(ಐವೈಸಿ) ಅಧ್ಯಕ್ಷ ಕೇಶವ್ ಚಂದ್ರ ಯಾದವ್ ಹಾಗೂ ಉಪಾಧ್ಯಕ್ಷ ಶ್ರೀನಿವಾಸ್ ಬಿ.ವಿ. ನೇತೃತ್ವದಲ್ಲಿ ಕನ್ಯಾಕುಮಾರಿಯಿಂದಡಿಸೆಂಬರ್ 16ರಂದುಯುವ ಕ್ರಾಂತಿ ಯಾತ್ರೆ ಆರಂಭವಾಗಿದೆ. ಜನವರಿ 30ಕ್ಕೆ ನವದೆಹಲಿ ತಲುಪಲಿದ್ದು, ಬೃಹತ್ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗಿದೆ.
ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತು ಐವೈಸಿ ವಕ್ತಾರ ಅಮ್ರೀಶ್ ರಂಜನ್ ಪಾಂಡೆ ಮಾಹಿತಿ ನೀಡಿದ್ದಾರೆ.
‘ನಾವು ಪಾಕಿಸ್ತಾನದಲ್ಲಿ ಬಿರಿಯಾನಿ ಸೇವಿಸಲು ಹೋಗುತ್ತಿಲ್ಲ. ಚೈತನ್ಯಯುತ ಯುವ ಸಮುದಾಯದೊಂದಿಗೆರಾಷ್ಟ್ರ ವಿರೋಧಿ ಶಕ್ತಿಗಳನ್ನು ತೋರಿಸಲಿದ್ದೇವೆ’ ಎಂದು ಪಾಂಡೆ ಹೇಳಿದ್ದಾರೆ.
‘ನಮ್ಮ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿದೆ.ಈಗಾಗಲೇ ಸುಮಾರು 9 ಸಾವಿರ ಕಿ.ಮೀ ಸಾಗಿದ್ದೇವೆ. ಸದ್ಯ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸಂಚರಿಸಿದ್ದು, ಪಂಜಾಬ್ ಮೂಲಕ ಜಮ್ಮು ಕಾಶ್ಮೀರ ತಲುಪಲಿದ್ದೇವೆ’ ಎಂದರು.
‘ಬಾವುಟ ಹಾರಿಸುವ ಮೂಲಕ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸಾರಲಿದ್ದೇವೆ. ಕೆಲವು ರಾಜಕೀಯ ಪಕ್ಷಗಳ ನಾಯಕರುಕಾಶ್ಮೀರ ಯುವಕರ ಕುರಿತು ಮಾಡುತ್ತಿರುವ ಅಪಪ್ರಚಾರದ ಬದಲಾಗಿ, ಇಲ್ಲಿನ ಯುವ ಸಮುದಾಯ ಹೊಂದಿರುವ ರಾಷ್ಟ್ರೀಯ ಭಾವನೆಯನ್ನು ಬಿಂಬಿಸಲಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.