ವಾಸಿಂಗ್ಟನ್: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಭಾರತಕ್ಕೆ 1 ಬಿಲಿಯನ್ ಡಾಲರ್(7,600 ಕೋಟಿ ರೂ.)ತುರ್ತು ಧನ ಸಹಾಯ ನೀಡಲು ವಿಶ್ವ ಬ್ಯಾಂಕ್ ಗುರುವಾರ ಅನುಮೋದನೆ ನೀಡಿದೆ.
ಇಲ್ಲಿಯವರೆಗೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿಗೆ 53 ಜನರು ಬಲಿಯಾಗಿದ್ದು, 2,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿಸಿದೆ.
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ವಿಶ್ವ ಬ್ಯಾಂಕ್ ತನ್ನ ಮೊದಲ ಯೋಜನೆಯಲ್ಲಿ 25 ದೇಶಗಳಿಗೆ ಸಹಾಯ ಮಾಡಲಿವೆ.
ಮುಂದಿನ ದಿನಗಳಲ್ಲಿ 40 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ತ್ವರಿತ ಕಾರ್ಯಾಚರಣೆ ಮಾಡಲು ಸಹಾಯಹಸ್ತ ಚಾಚುವುದಾಗಿ ವಿಶ್ವ ಬ್ಯಾಂಕ್ ಹೇಳಿದೆ.
ವಿಶ್ವ ಬ್ಯಾಂಕ್ನ ತುರ್ತು ಹಣಕಾಸು ನೆರವಿನ ದೊಡ್ಡ ಭಾಗ ಭಾರತಕ್ಕೆ ದೊರೆಯಲಿದೆ.
ನೀತಿ ಆಧಾರಿತ ಹಣಕಾಸು ಸಹಾಯಕ್ಕೆ ಒತ್ತು ನೀಡಲಾಗುವುದು. ಆ ಮೂಲಕ ವಿವಿಧ ದೇಶಗಳಲ್ಲಿ ವಾಸಿಸುವ ಬಡ ಕುಟುಂಬಗಳು ಮತ್ತು ಪರಿಸರ ರಕ್ಷಿಸುವ ಕೆಲಸಕ್ಕೆ ಒತ್ತು ನೀಡಲಾಗುತ್ತಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.
'ವಿಶ್ವ ಬ್ಯಾಂಕ್ ಸಮೂಹವು ಕೋವಿಡ್-19 ಹರಡುವುದನ್ನು ಕಡಿಮೆ ಮಾಡಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾವು ಈಗಾಗಲೇ 65ಕ್ಕೂ ಹೆಚ್ಚು ದೇಶಗಳಲ್ಲಿ ಜನರ ಆರೋಗ್ಯಕ್ಕೆ ಸಂಬಂಧಿಸಿದ ತ್ವರಿತಕಾರ್ಯಾಚರಣೆಯನ್ನು ಮಾಡುತ್ತಿದ್ದೇವೆ' ಎಂದು ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.