ಲಖನೌ: ಉತ್ತರ ಪ್ರದೇಶದ ದೇವಾಲಯಗಳಲ್ಲೂ ಕೊರೊನಾ ವೈರಸ್ ಆತಂಕ ಮೂಡಿಸಿದೆ.
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಪೂಜಾರಿಗಳು ದೇವತೆಗಳಿಗೆ ಮಾಸ್ಕ್ಗಳನ್ನು ಧರಿಸಿದ್ದಾರೆ. ಜತೆಗೆ, ದೇವಾಲಯದಲ್ಲಿನ ವಿಗ್ರಹಗಳನ್ನು ಮುಟ್ಟುವ ಮುನ್ನ ಸ್ಯಾನಿಟೈಸರ್ ಉಪಯೋಗಿಸುವಂತೆ ಭಕ್ತಾದಿಗಳಿಗೆ ಸೂಚಿಸುತ್ತಿದ್ದಾರೆ.
ಲಖಿಮಪುರ–ಖೇರಿ ಜಿಲ್ಲೆಯ ಪ್ರಸಿದ್ಧ ಸಂಕಟ ದೇವಿ ದೇವಾಲಯದಲ್ಲಿನ ದೇವರ ವಿಗ್ರಗಳ ಕುತ್ತಿಗೆ ಫಲಕವನ್ನು ಸಹ ಹಾಕಲಾಗಿದೆ. ವೈರಸ್ ಹಬ್ಬುವುದನ್ನು ತಡೆಯಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ವಿವರ ಇದರಲ್ಲಿದೆ.
‘ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುವುದರಿಂದ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ’ ಎಂದು ಪೂಜಾರಿಯೊಬ್ಬರು ತಿಳಿಸಿದ್ದಾರೆ.
ಗೋಮೂತ್ರಕ್ಕೆ ಮೊರೆ! ನವದೆಹಲಿ(ಪಿಟಿಐ): ‘ಗೋಮೂತ್ರ ಸೇವಿಸಿ ಕೊರೊನಾ ವೈರಸ್ನಿಂದ ರಕ್ಷಣೆ ಪಡೆಯಿರಿ’ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಶನಿವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.
‘ಗೋಮೂತ್ರ ಪಾರ್ಟಿ’ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಲಿನಲ್ಲಿ ನಿಂತು ಜನರು ಗೋಮೂತ್ರ ಪಡೆದರು.
ಮಹಾಸಭಾದ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಸ್ವಾಮಿ ಚಕ್ರಪಾಣಿ ಮಾತನಾಡಿ, ’ಮಾಂಸಾಹಾರ ಸೇವಿಸುವವರಿಗೆ ಶಿಕ್ಷೆ ವಿಧಿಸಲು ಕೊರೊನಾ ವೈರಸ್ ಅವತಾರದ ರೂಪದಲ್ಲಿ ಬಂದಿದೆ’ ಎಂದರು.