ನವದೆಹಲಿ: ಲಾಕ್ಡೌನ್ ಪರಿಣಾಮ ದೇಶದ ವಿವಿಧೆಡೆ ಅತಂತ್ರರಾಗಿರುವ ಸುಮಾರು 6.6 ಲಕ್ಷ ಜನರ ನೆರವಿಗಾಗಿ 21 ಸಾವಿರ ಪರಿಹಾರ ಶಿಬಿರಗಳು ಕಾರ್ಯಾರಂಭ ಮಾಡಿವೆ ಗೃಹ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯಾ ಸಲಿಲಾ ಶ್ರೀವಾತ್ಸವ, ಈ ಶಿಬಿರಗಳಲ್ಲಿ ಆಹಾರವನ್ನು ಒದಗಿಸಲಾಗುತ್ತಿದೆ. ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ತೃಪ್ತಿಕರವಾಗಿದೆ ಎಂದು ತಿಳಿಸಿದರು.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಒದಗಿಸಿರುವ ಮಾಹಿತಿ ಪ್ರಕಾರ, 21,064 ಶಿಬಿರಗಳಲ್ಲಿ ಒಟ್ಟು 6.66 ಲಕ್ಷ ಜನರಿಗೆ ಆಸರೆ ಒದಗಿಸಲಾಗಿದೆ. ಒಟ್ಟಾರೆ 23 ಲಕ್ಷ ಜನರಿಗೆ ಆಹಾರ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.
ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ದೇಶದಾದ್ಯಂತ ಅಗತ್ಯ ವಸ್ತುಗಳ ಸಾಗಣೆ ವ್ಯವಸ್ಥೆಯೂ ಸಮಾಧಾನಕರವಾಗಿದೆ. ಲಾಕ್ ಡೌನ್ ಯಶಸ್ವಿಯಾಗಲಿದ್ದು, ಒಟ್ಟಾಗಿ ಕೋವಿಡ್ ಸವಾಲುಗಳನ್ನು ಎದುರಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಲಾಕ್ ಡೌನ್ ಕಟ್ಟುನಿಟ್ಟಿನ ಜಾರಿಗೆ ಅರೆಸೇನಾ ಪಡೆ ನಿಯೋಜಿಸುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ, ರಾಜ್ಯಗಳು ಗೃಹ ಸಚಿವಾಲಯ ನೆರವು ಬಯಸಿದರೆ ಆ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.