ನವದೆಹಲಿ: ಇಲ್ಲಿನ ನಿಜಾಮುದ್ದೀನ್ ಪ್ರದೇಶದ ಮಸೀದಿಯೊಂದರಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ7 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಧಾರ್ಮಿಕ ಸಭೆಗೆ ಹಾಜರಾದವರಲ್ಲಿ 300 ಜನರಿಗೆ ಕೋವಿಡ್- 19 ಸಂಬಂಧಿಸಿದ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, 24 ಜನರಲ್ಲಿ ಸೋಂಕು ಇರುವುದು ದೃಢವಾಗಿದೆ.
ಮಸೀದಿ ಇರುವ ಪ್ರದೇಶದಲ್ಲಿ ವ್ಯಾಪಕ ನಿರ್ಬಂಧ ಹೇರಲಾಗಿದ್ದು, 24 ಜನರಲ್ಲಿ ಕೊರೊನಾ ಸೋಂಕು ಇರುವುದು ಕಂಡುಬಂದಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಇಂದು ಬೆಳಗ್ಗೆ ತಿಳಿಸಿದ್ದಾರೆ.
ನೂರಾರು ಜೀವಗಳನ್ನು ಅಪಾಯಕ್ಕೆ ಒಡ್ಡಿದ ಮರ್ಕಜ್ ನಿಜಾಮುದ್ದೀನ್ ಮಸೀದಿ ವಿರುದ್ಧ ಕೇಸು ದಾಖಲಿಸಲು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆದೇಶಿಸಿದ್ದಾರೆ.
ಇವತ್ತು ಬೆಳಿಗ್ಗೆ ತಬ್ಲಿಗಿ ಜಮಾತ್ನ ದೆಹಲಿ ಮುಖ್ಯಾಲಯಕ್ಕೆ ಬೀಗಮುದ್ರೆ ಹಾಕಲಾಗಿದ್ದು, ಆ ಪ್ರದೇಶದ 800 ಮಂದಿಯನ್ನು ಬಸ್ಸುಗಳಲ್ಲಿ ಕರೆದೊಯ್ದು ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಮಾ.13 ರಿಂದ 15ರವರೆಗೆ ನಡೆದ ಧಾರ್ಮಿಕ ಸಮಾವೇಶದಲ್ಲಿ ದೇಶ-ವಿದೇಶದ ಪ್ರತಿನಿಧಿಗಳು ಭಾಗಿಯಾಗಿದ್ದರು.
ಈ ಸಮಾವೇಶದಲ್ಲಿ ಭಾಗಿಯಾದವರು ವಿದೇಶಗಳಲ್ಲಿ ಸುತ್ತಾಡಿ, ವಿವಿಧೆಡೆ ಧಾರ್ಮಿಕ ಸಭೆ ನಡೆಸಿದ್ದಾರೆ. ಎಲ್ಲ ರಾಜ್ಯಗಳಿಗೆ ಈ ಕುರಿತು ಸಂದೇಶ ರವಾನಿಸಲಾಗಿದ್ದು, ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಮೃತಪಟ್ಟವರಲ್ಲಿ ತೆಲಂಗಾಣದ ಆರು ಜನ ಮತ್ತು ಶ್ರೀನಗರದ ಓರ್ವ ವ್ಯಕ್ತಿ ಸೇರಿದ್ದಾರೆ.