ನವದೆಹಲಿ:ಕೊರೊನಾ ವಿರುದ್ಧ ದೇಶದ ಹೋರಾಟವನ್ನು ದೀಪ ಬೆಳಗುವುದರ ಮೂಲಕ ಪ್ರದರ್ಶಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿರುವುದಕ್ಕೆ ಪ್ರತಿಪಕ್ಷಗಳ ಮುಖಂಡರಿಂದ ಟೀಕೆಗಳು ವ್ಯಕ್ತವಾಗಿವೆ.
ಏಪ್ರಿಲ್ 5, ಭಾನುವಾರ ಎಲ್ಲರೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ ರಾತ್ರಿ 9 ಗಂಟೆಗೆ ಸರಿಯಾಗಿ, ಒಂಬತ್ತು ನಿಮಿಷಗಳು ದೀಪ, ಮೇಣದ ಬತ್ತಿ, ಟಾರ್ಚ್ ಅಥವಾ ಮೊಬೈಲ್ ಫ್ಲ್ಯಾಶ್ಲೈಟ್ ಬೆಳಗುವಂತೆ ಕರೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಇದನ್ನು ಟ್ವೀಟ್ ಮೂಲಕ ಟೀಕಿಸಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, 'ಏಪ್ರಿಲ್ 5 ರಂದು ದೀಪ ಬೆಳಗಿಸಬೇಕೆಂದು ನೀವು ಹೇಳಿರುವ ಮಾತುಗಳನ್ನು ನಾವು ಕೇಳುತ್ತೇವೆ. ಅದಕ್ಕೆ, ಪ್ರತಿಯಾಗಿ ನೀವು ನಮ್ಮ ಮಾತುಗಳನ್ನು ಕೇಳಿ. ಸಾಂಕ್ರಾಮಿಕ ರೋಗ ತಜ್ಞರು ಮತ್ತು ಅರ್ಥಶಾಸ್ತ್ರಜ್ಞರ ಸಲಹೆಗಳನ್ನು ನೀವು ದಯಮಾಡಿ ಆಲಿಸಿ' ಎಂದು ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರನ್ನು ಪ್ರಧಾನ್ ಶೋಮ್ಯಾನ್ ಎಂದಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, 'ನಾನು ಪ್ರಧಾನ್ ಶೋಮ್ಯಾನ್ ಅವರ ಮಾತುಗಳನ್ನು ಆಲಿಸಿದೆ. ಜನರ ನೋವು, ಅವರ ಮೇಲಿನ ಹೊರೆ, ಅವರ ಆರ್ಥಿಕ ಆತಂಕಗಳನ್ನು ಹೇಗೆ ದೂರಮಾಡಬೇಕೆಂಬುದರ ಕುರಿತು ಅವರು ಏನೂ ಹೇಳಲಿಲ್ಲ. ಲಾಕ್ಡೌನ್ ನಂತರದ ದಿನಗಳಲ್ಲಿ ಉದ್ಬವಿಸಿರುವ ಸಮಸ್ಯೆಗಳ ಬಗ್ಗೆ ಏನೂ ಹಂಚಿಕೊಳ್ಳಲಿಲ್ಲ. ಅವರಿಗೆ ಭವಿಷ್ಯದ ದೂರದೃಷ್ಟಿ ಇಲ್ಲ. ಇದು ಭಾರತದ ಫೋಟೋ-ಅಪ್ ಪ್ರಧಾನ ಮಂತ್ರಿ ಪ್ರದರ್ಶಿಸಿದ ಒಂದು ಒಳ್ಳೆಯ ಕ್ಷಣ!' ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಕಟುಕಿರುವ ಮತ್ತೊಬ್ಬ ಕಾಂಗ್ರೆಸ್ ಮುಂಖಂಡ ಅಭಿಷೇಕ್ ಸಾಂಘ್ವಿ, 'ಪ್ರಧಾನಿ ಮೋದಿ ಅವರು ಜನರಿಗೆ ಅನಗತ್ಯ ಮನೆಗೆಲಸ ನೀಡುವುದನ್ನು ನಿಲ್ಲಿಸಬೇಕೆಂದು ನಾನು ಬಯಸುತ್ತೇನೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಉದ್ಬವಿಸಿರುವ ವಲಸೆ ಕಾರ್ಮಿಕ ಬಿಕ್ಕಟ್ಟನ್ನು ಸಕ್ರಿಯವಾಗಿ ಪರಿಹರಿಸಲು ಪ್ರಾರಂಭಿಸಬೇಕು' ಎಂದು ಟ್ವೀಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.