ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಗುಡುಗು: ನಡುಗಿದ ದಿಲ್ಲಿ

ಕಿಸಾನ್‌ ಮುಕ್ತಿ ಮೋರ್ಚಾ: ಕೃಷಿಕರ ಹೋರಾಟದಲ್ಲಿ ಮೋದಿ ವಿರೋಧಿಗಳ ಒಗ್ಗಟ್ಟಿನ ಮಂತ್ರ
Last Updated 30 ನವೆಂಬರ್ 2018, 19:23 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ನೋವು, ಹೊರೆ ಮತ್ತು ಆಕಾಂಕ್ಷೆಗಳನ್ನು ಹೊತ್ತು ದೇಶದ ಬೇರೆ ಬೇರೆ ಭಾಗಗಳಿಂದ ಬಂದ ಸಾವಿರಾರು ರೈತರು ಸಂಸತ್‌ ಭವನದತ್ತ ಶುಕ್ರವಾರ ಹೆಜ್ಜೆ ಹಾಕಿದರು. ರೈತರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿತ್ತು.

ಸಂಸತ್ತಿನತ್ತ ಸಾಗಿದ ರೈತರನ್ನು ಪಾರ್ಲಿಮೆಂಟ್‌ ಸ್ಟ್ರೀಟ್‌ ಪೊಲೀಸ್‌ ಠಾಣೆ ಸಮೀಪವೇ ತಡೆಯಲಾಯಿತು. ಅಲ್ಲಿಯೇ ಜಮಾವಣೆಯಾದ ಅನ್ನದಾತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಬೇಡಿಕೆಗಳು ಈಡೇರದಿದ್ದರೆ ಮತವನ್ನೇ ಚಲಾಯಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆ ರವಾನಿಸಿದರು. ‘ನಮಗೆ ಅಯೋಧ್ಯೆ ಬೇಡ, ಸಾಲ ಮನ್ನಾ ಮಾಡಿ’ ಎಂಬ ಘೋಷಣೆಗಳು ಮೊಳಗಿದವು.

ಪ್ರತಿಭಟನೆಯಲ್ಲಿ ಕಂಡುಬಂದ ರೈತರು
ಪ್ರತಿಭಟನೆಯಲ್ಲಿ ಕಂಡುಬಂದ ರೈತರು

ವಿವಿಧ ರಾಜಕೀಯ ಪಕ್ಷಗಳ ಭಾರಿ ಬೆಂಬಲ ರೈತರ ಹೋರಾಟಕ್ಕೆ ದೊರೆತಿದೆ.ಕಾಂಗ್ರೆಸ್‌, ಎಎಪಿ, ನ್ಯಾಷನಲ್‌ ಕಾನ್ಫರೆನ್ಸ್‌, ಸಿಪಿಐ, ಸಿಪಿಎಂ, ಎನ್‌ಸಿಪಿ ಮುಂತಾದ ಪಕ್ಷಗಳ ಮುಖಂಡರು ರೈತರ ಬೆನ್ನಿಗೆ ನಿಂತರು.

ಇದಕ್ಕೂ ಮೊದಲು ದೇಶದ ನಾನಾ ಮೂಲೆ, ಮೂಲೆಗಳಿಂದ ಗುರುವಾರ ದೆಹಲಿಗೆ ಬಂದಿಳಿದ ಹತ್ತು ಸಾವಿರಕ್ಕೂ ರೈತರು ಮೈಕೊರೆಯುವ ಚಳಿಯಲ್ಲಿ ಇಡೀ ರಾತ್ರಿ ರಾಮಲೀಲಾ ಮೈದಾನದಲ್ಲಿ ಕಳೆದರು.

ಎರಡು ತಿಂಗಳ ಅಂತರದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಎರಡನೇ ದೊಡ್ಡ ಪ್ರತಿಭಟನೆ ಇದಾಗಿದೆ.

ಅಕ್ಟೋಬರ್‌ನಲ್ಲಿ ಕಬ್ಬು ಬೆಳೆಗಾರರ ಮೇಲೆ ಪೊಲೀಸರು ಜಲಫಿರಂಗಿ ಮತ್ತು ಲಾಠಿ ಪ್ರಹಾರ ನಡೆಸಿ ದೆಹಲಿ ಪ್ರವೇಶಿಸದಂತೆ ತಡೆದಿದ್ದರು. ಅನ್ನದಾತನ ಮೇಲೆ ಬಲಪ್ರಯೋಗ ಮಾಡಿದ ಸರ್ಕಾರದ ವಿರುದ್ಧ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

**

ತಲೆಬುರುಡೆ ತಂದ ರೈತ

ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ನಾನಾ ರಾಜ್ಯಗಳ ರೈತರು ರೈಲು, ಬಸ್‌ ಮತ್ತು ಖಾಸಗಿ ವಾಹನಗಳಲ್ಲಿ ದೆಹಲಿಗೆ ಬಂದಿಳಿದಿದ್ದರು.

ವೈವಿಧ್ಯಮಯ ವೇಷಭೂಷಣ ತೊಟ್ಟ ರೈತರು ಎಲ್ಲರ ಗಮನ ಸೆಳೆದರು. ಅರೆ ಬೆತ್ತಲೆಯಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡಿನ ರೈತರು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ, ಅಸ್ಥಿಪಂಜರಗಳನ್ನು ತಮ್ಮೊಂದಿಗೆ ತಂದಿದ್ದರು.

ರೈತರ ಹೋರಾಟ ಬೆಂಬಲಿಸಿ ಮಹಿಳೆಯರು, ವಿದ್ಯಾರ್ಥಿಗಳು, ಕಲಾವಿದರು, ವೈದ್ಯರು, ಪ್ರಾಧ್ಯಾಪಕರು, ಯುವಕರು, ವಕೀಲರು, ಮಾಜಿ ಯೋಧರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ದೆಹಲಿಯಲ್ಲಿ ಶುಕ್ರವಾರ ನಡೆದ ಕಿಸಾನ್‌ ಮುಕ್ತಿ ಜಾಥಾದಲ್ಲಿ ಪಾಲ್ಗೊಂಡಿದ್ದ ತಲೆಬುರುಡೆ ಹೊತ್ತ ತಮಿಳುನಾಡು ರೈತ ಪಿಟಿಐ ಚಿತ್ರ​
ದೆಹಲಿಯಲ್ಲಿ ಶುಕ್ರವಾರ ನಡೆದ ಕಿಸಾನ್‌ ಮುಕ್ತಿ ಜಾಥಾದಲ್ಲಿ ಪಾಲ್ಗೊಂಡಿದ್ದ ತಲೆಬುರುಡೆ ಹೊತ್ತ ತಮಿಳುನಾಡು ರೈತ ಪಿಟಿಐ ಚಿತ್ರ​

ಮೆರವಣಿಗೆ ಸಾಗುವ ರಸ್ತೆಯಲ್ಲಿ ಹೆಜ್ಜೆ, ಹೆಜ್ಜೆಗೂ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಸಂಚಾರಕ್ಕೆ ಅಡ್ಡಿ ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

**

ರಾಜಕೀಯ ಒಗ್ಗಟ್ಟಿಗೆ ವೇದಿಕೆ

ಬಿಜೆಪಿ ವಿರೋಧಿ ಪಕ್ಷಗಳಿಗೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯಲು ಕಿಸಾನ್‌ ಮುಕ್ತಿ ಮೋರ್ಚಾ ವೇದಿಕೆ ಒದಗಿಸಿತು.

ರಾಜಕೀಯ ವಿರೋಧಿಗಳಾದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇಬ್ಬರೂ ಅಕ್ಕಪಕ್ಕ ಕುಳಿತುಕೊಳ್ಳದಿದ್ದರೂ ಪರಸ್ಪರ ಮುಗುಳ್ನಗೆ ಸೂಸಿ, ಹಸ್ತಲಾಘವ ಮಾಡಿದರು.

ರೈತರು ಮತ್ತು ಯುವಕರ ಹಿತಾಸಕ್ತಿಯ ವಿಷಯ ಬಂದಾಗ ವಿಭಿನ್ನ ತತ್ವ, ಸಿದ್ಧಾಂತದ ರಾಜಕೀಯ ಪಕ್ಷಗಳು ತಮ್ಮ ಎಲ್ಲ ಪಕ್ಷಭೇದ ಮರೆತು ರೈತರ ಬೆಂಬಲಕ್ಕೆ ನಿಲ್ಲುತ್ತವೆ ಎಂದು ರಾಹುಲ್‌ ಭರವಸೆ ನೀಡಿದರು.

‘ರೈತರ ನೋವು, ನಲಿವುಗಳಿಗೆ ಸ್ಪಂದಿಸಬೇಕಾದ ಪ್ರಧಾನಿ ಮೋದಿ ಅವರು ಅಂಬಾನಿ, ಅದಾನಿ ಅವರಂಥ ಉದ್ಯಮಿಗಳ ರಕ್ಷಣೆಗೆ ನಿಂತಿದ್ದಾರೆ’ ಎಂದು ಇಬ್ಬರೂ ನಾಯಕರು ಹರಿಹಾಯ್ದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ರಾಮಲೀಲಾ ಮೈದಾನದಲ್ಲಿದ್ದ ರೈತರನ್ನು ಕಂಡು ಬೆಂಬಲ ಸೂಚಿಸಿದರು.

ಸೀತಾರಾಂ ಯೆಚೂರಿ, ಡಿ.ರಾಜಾ, ಶರದ್‌ ಪವಾರ್‌, ಶರದ್‌ ಯಾದವ್‌, ಫಾರೂಕ್‌ ಅಬ್ದುಲ್ಲಾ, ಕನ್ಹಯ್ಯಾ ಕುಮಾರ್‌, ಶಾಸಕ ಜಿಗ್ನೇಶ್‌ ಮೇವಾನಿ, ಮೇಧಾ ಪಾಟ್ಕರ್‌, ಯೋಗೇಂದ್ರ ಯಾದವ್‌ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ದೆಹಲಿಯಲ್ಲಿ ಶುಕ್ರವಾರ ನಡೆದ ಕಿಸಾನ್‌ ಮುಕ್ತಿ ಜಾಥಾದಲ್ಲಿ ಪಾಲ್ಗೊಂಡಿದ್ದ ರೈತರು ಪಿಟಿಐ ಚಿತ್ರ
ದೆಹಲಿಯಲ್ಲಿ ಶುಕ್ರವಾರ ನಡೆದ ಕಿಸಾನ್‌ ಮುಕ್ತಿ ಜಾಥಾದಲ್ಲಿ ಪಾಲ್ಗೊಂಡಿದ್ದ ರೈತರು ಪಿಟಿಐ ಚಿತ್ರ

**

ಈ ದೇಶ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದಿಂದ ನಡೆಯುತ್ತಿಲ್ಲ. ಅನ್ನ ನೀಡುವ ರೈತರು, ಮಹಿಳೆಯರು ಮತ್ತು ಯುವ ಜನಾಂಗದಿಂದ ನಡೆಯುತ್ತಿದೆ
–ರಾಹುಲ್‌ ಗಾಂಧಿ,ಕಾಂಗ್ರೆಸ್‌ ಅಧ್ಯಕ್ಷ

**

ಕಳೆದ ನಾಲ್ಕೂವರೆ ವರ್ಷದಲ್ಲಿ ಎನ್‌ಡಿಎ ಸರ್ಕಾರ ಉದ್ಯಮಿಗಳ ಹಿತ ಕಾಯುವ ಕೆಲಸವೊಂದನ್ನು ಬೇರೆ ಏನನ್ನೂ ಮಾಡಿಲ್ಲ. ಆದಿವಾಸಿಗಳ ಜಮೀನು ಕಿತ್ತುಕೊಂಡು ಉದ್ಯಮಿಗಳಿಗೆ ನೀಡಿದೆಯೇ ಹೊರತು ರೈತರಿಗಾಗಿ ಒಂದೇ ಒಂದು ಯೋಜನೆ ರೂಪಿಸಿಲ್ಲ
– ಮೇಧಾ ಪಾಟ್ಕರ್‌,ನರ್ಮದಾ ಬಚಾವೊ ಆಂದೋಲನ ಕಾರ್ಯಕರ್ತೆ

**

ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯನ್ನು ಈ ಬಾರಿ ಅಧಿಕಾರದಿಂದ ಕಿತ್ತೆಸೆದು ರೈತರ ಕಷ್ಟಗಳಿಗೆ ಸ್ಪಂದಿಸುವ ಪರ್ಯಾಯ ಪಕ್ಷಗಳನ್ನು ಅಧಿಕಾರಕ್ಕೆ ತರಬೇಕಾಗಿದೆ. ರೈತರು ಮತ್ತು ಕೂಲಿ, ಕಾರ್ಮಿಕರು ಒಂದಾದರೆ ಇದು ಕಷ್ಟವಲ್ಲ
–ಸೀತಾರಾಂ ಯೆಚೂರಿ,ಸಿಪಿಎಂ ನಾಯಕ

**

ರೈತರ ಬಗ್ಗೆ ಕುರುಡಾಗಿರುವ ಸರ್ಕಾರವನ್ನು ಎಚ್ಚರಿಸಲು ನಾವಿಲ್ಲಿ ಒಂದಾಗಿದ್ದೇವೆ. 2019ರ ಚುನಾವಣೆಯಲ್ಲಿ ಅಧಿಕಾರದಿಂದ ಕೆಳಗಿಳಿಸುವ ಎಚ್ಚರಿಕೆಯ ಕರೆಗಂಟೆ ಇಲ್ಲಿಂದ ಮೊಳಗಲಿದೆ
–ಶರದ್‌ ಪವಾರ್‌,ಎನ್‌ಸಿಪಿ ನಾಯಕ

**

ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ದೇಶದಲ್ಲಿ ‘ಸುಲಲಿತ ವ್ಯಾಪಾರ’ ಪರಿಸ್ಥಿತಿ ಸುಧಾರಿಸಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ‘ಸುಲಲಿತ ವ್ಯಾಪಾರ’ದ ಜತೆಗೆ ‘ಸುಲಲಿತ ಕೃಷಿ’ಗೂ ಆದ್ಯತೆ ನೀಡುವುದು ಮುಖ್ಯ.
–ಎಚ್‌.ಡಿ. ದೇವೇಗೌಡ,ಮಾಜಿ ಪ್ರಧಾನಿ, ಜೆಡಿಎಸ್‌ ಮುಖಂಡ

**

ಪ್ರಧಾನಿ ನರೇಂದ್ರ ಮೋದಿ ರೈತರ ವಿರೋಧಿ.
–ಯೋಗೇಂದ್ರ ಯಾದವ್‌,ಸ್ವರಾಜ್‌ ಇಂಡಿಯಾ ಪಕ್ಷದ ನಾಯಕ

**

ಇಲ್ಲಿ ಸೇರಿರುವ ರೈತರ ಬೃಹತ್ ಸಮಾವೇಶ ನಮ್ಮ ಸಂಸತ್‌. ಇಲ್ಲಿ ಕೈಗೊಳ್ಳುವ ನಿರ್ಣಯವನ್ನು ಸಂಸತ್‌ ಅಂಗೀಕರಿಸಬೇಕು.
–ದಿನೇಶ್‌ ತ್ರಿವೇದಿ,ತೃಣಮೂಲ ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT