ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ: ಜಾಗತಿಕ ಮಟ್ಟದಲ್ಲಿ ಆಕ್ಷೇಪ

ಮುಸ್ಲಿಮೇತರರಿಗೆ ಧರ್ಮಾಧಾರಿತ ಪೌರತ್ವ: ಭಾರತದ ಬದಲಾದ ನಿಲುವಿಗೆ ವಿಶ್ವ ಸಮುದಾಯದ ಅಸಮಾಧಾನ
Last Updated 31 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ
ADVERTISEMENT
""

ಜಾಗತಿಕ ಸಮುದಾಯವು ಭಾರತವನ್ನು, ಎಲ್ಲಾ ಧರ್ಮದ ಜನರಿಗೂ ಸಮಾನವಾದ ಅವಕಾಶ ನೀಡುವ ಜಾತ್ಯತೀತ ರಾಷ್ಟ್ರವೆಂದು ಪರಿಗಣಿಸುತ್ತದೆ ಎಂಬುದು ‘ಪೌರತ್ವ (ತಿದ್ದುಪಡಿ) ಕಾಯ್ದೆ–ಸಿಎಎ’ ವಿಚಾರದಲ್ಲಿ ಸ್ಪಷ್ಟವಾಗಿದೆ. ಧರ್ಮದ ಆಧಾರದಲ್ಲಿ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವ ಈ ಕಾಯ್ದೆಗೆ ಸಂಬಂಧಿಸಿದಂತೆ ಹಲವು ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ.

ಕೆಲವು ರಾಷ್ಟ್ರಗಳಂತೂ ನೇರವಾಗಿ ವಿರೋಧ ವ್ಯಕ್ತಪಡಿಸಿವೆ. ನೆರೆಯ ರಾಷ್ಟ್ರಗಳಲ್ಲಿ ಧಾರ್ಮಿಕ ಕಿರುಕುಳ ಅನುಭವಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಲು ಈ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಸರ್ಕಾರ ಹೇಳಿದ್ದು, ಆ ನೆರೆ ರಾಷ್ಟ್ರಗಳನ್ನು ಕೆರಳಿಸಿದೆ. ಈ ಸಂಬಂಧ ರಾಜತಾಂತ್ರಿಕ ಮಟ್ಟದಲ್ಲೂ ಅಸಮಾಧಾನ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಭಾರತದ ವಿದೇಶಾಂಗ ನೀತಿಯ ದಿಕ್ಕನ್ನು ನಿರ್ಧರಿಸಲಿದೆ.

ಅಮೆರಿಕದ ಜತೆ ಜಟಾಪಟಿ

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಅಮೆರಿಕದ ಕಾಂಗ್ರೆಸ್‌ನಲ್ಲಿ ನಿರ್ಣಯ ಮಂಡಿಸಲಾಗಿತ್ತು. ಪೌರತ್ವ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿ ಸಿದ ಬೆನ್ನಲ್ಲೇ, ಗೃಹ ಸಚಿವ ಅಮಿತ್ ಶಾ ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಅಮೆರಿಕದ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿತ್ತು. ಇದರ ಬೆನ್ನಲ್ಲೇ ಎರಡು ರಾಷ್ಟ್ರಗಳ ಸಚಿವರ ಮಟ್ಟದ ದ್ವಿಪಕ್ಷೀಯ ಸಭೆ ರದ್ದಾಯಿತು. ಇದು ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.

ಡಿಸೆಂಬರ್ 18ರಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಸಚಿವರ ಜತೆ ಸಭೆ ನಡೆಸಬೇಕಿತ್ತು. ಈ ಸಭೆಯಲ್ಲಿ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್ ಅವರು ಭಾಗವಹಿಸಬೇಕಿತ್ತು. ಜಮ್ಮು–ಕಾಶ್ಮೀರದಲ್ಲಿನ ಸ್ಥಿತಿಗತಿಯ ಬಗ್ಗೆ ಜಯಪಾಲ್ ಅವರು ಆಗಸ್ಟ್‌ನಲ್ಲಿ ಅಮೆರಿಕದ ಸಂಸತ್‌ನಲ್ಲಿ ಪ್ರಸ್ತಾವನೆ ಮಂಡಿಸಿದ್ದರು. ಕಾಶ್ಮೀರದಲ್ಲಿ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎಂದು ಜಯಪಾಲ್ ಆರೋಪಿಸಿದ್ದರು. ವಿಶೇಷಾಧಿಕಾರ ರದ್ದು ಮಾಡಿದ ನಂತರ ಹೇರಲಾದ ನಿರ್ಬಂಧಗಳನ್ನು ವಾಪಸ್ ಪಡೆಯಬೇಕು ಎಂದು ಪ್ರಮೀಳಾ ಒತ್ತಾಯಿಸಿದ್ದರು. ಭಾರತವು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಸಚಿವರ ಮಟ್ಟದ ಸಭೆಯಲ್ಲಿ ಜಯಪಾಲ್ ಭಾಗಿಯಾಗುವುದಕ್ಕೆ ಜೈಶಂಕರ್ ಆಕ್ಷೇಪ ವ್ಯಕ್ತಪಡಿಸಿದರು. ಜಯಪಾಲ್ ಅವರನ್ನು ಸಭೆಯಿಂದ ಹೊರಗಿಡುವಂತೆ ಆಗ್ರಹಿಸಿದರು. ಇದನ್ನು ಅಮೆರಿಕವು ನಿರಾಕರಿಸಿತು. ಜೈಶಂಕರ್ ಸಭೆಯನ್ನು ರದ್ದುಪಡಿಸಿದರು.

‘ಅಮೆರಿಕ ಸಂಸತ್‌ನಲ್ಲಿ ಮಂಡಿಸಿದ ಪ್ರಸ್ತಾವನೆ ಬಗ್ಗೆ ಅರಿವಿದೆ. ಆದರೆ, ಜಮ್ಮು–ಕಾಶ್ಮೀರದ ವಸ್ತುಸ್ಥಿತಿ ಬಗ್ಗೆಯಾಗಲಿ ಅಥವಾ ಕಣಿವೆ ರಾಜ್ಯ ಕುರಿತಂತೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಹೀಗಾಗಿ ಪ್ರಮೀಳಾ ಅವರನ್ನು ಭೇಟಿಯಾಗಲು ನನಗೆ ಆಸಕ್ತಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಭಾರತ ಸರ್ಕಾರವು ಭಿನ್ನಾಭಿಪ್ರಾಯಗಳನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಪ್ರಮೀಳಾ ಜಯಪಾಲ್ ತಿರುಗೇಟು ನೀಡಿದರು.

ಬಾಂಗ್ಲಾದೇಶ ತೀವ್ರ ಅಸಮಾಧಾನ

‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಧಾರ್ಮಿಕ ಕಿರುಕುಳ ಅನುಭವಿಸುತ್ತಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಬಾಂಗ್ಲಾದ ಅಸಮಾಧಾನಕ್ಕೆ ಕಾರಣವಾಗಿದೆ. ಸಂಸತ್ತಿನಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಮೇಲೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಬಾಂಗ್ಲಾದ ವಿದೇಶಾಂಗ ಮತ್ತು ಹಣಕಾಸು ಸಚಿವರ ಭಾರತ ಭೇಟಿ ನಿಗದಿಯಾಗಿತ್ತು. ಶಾ ಅವರ ಹೇಳಿಕೆ ಸುದ್ದಿಯಾಗುತ್ತಿದ್ದಂತೆಯೇ, ಈ ಇಬ್ಬರು ಸಚಿವರೂ ತಮ್ಮ ಭಾರತ ಭೇಟಿಯನ್ನು ರದ್ದುಗೊಳಿಸಿದರು.

ಶಾ ಅವರ ಹೇಳಿಕೆಯ ಕಾರಣದಿಂದಲೇ ಈ ಎರಡೂ ಭೇಟಿ ರದ್ದಾದವು ಎಂಬ ಆರೋಪ ವನ್ನು ಭಾರತದ ವಿದೇಶಾಂಗ ಸಚಿವಾಲಯ ಅಲ್ಲಗಳೆದಿದೆ. ‘ಹಿಂದಿನ ಸೇನಾ ಆಡಳಿತದ ವೇಳೆ ಹಿಂದೂಗಳಿಗೆ ಕಿರುಕುಳ ನೀಡಲಾಗುತ್ತಿತ್ತು ಎಂದಷ್ಟೇ ಗೃಹ ಸಚಿವರು ಹೇಳಿದ್ದು. ಈಗಿನ ಸರ್ಕಾರದ ಅಡಿ ಕಿರುಕುಳ ನಡೆಯುತ್ತಿದೆ ಎಂದು ಅವರು ಹೇಳಿಲ್ಲ’ ಎಂದು ವಿದೇಶಾಂಗ ಸಚಿವಾಲಯವು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿತು. ಆದರೆ, ಶಾ ಅವರ ಹೇಳಿಕೆಗೆ ಬಾಂಗ್ಲಾವು ತೀವ್ರವಾಗಿಯೇ ಪ್ರತಿಕ್ರಿಯೆ ನೀಡಿತು.

‘ಬಾಂಗ್ಲಾದೇಶದಲ್ಲಿ ಮುಸ್ಲಿಂ, ಹಿಂದೂ, ಬೌದ್ಧ, ಕ್ರೈಸ್ತ ಧರ್ಮೀಯರು ಸೌಹಾರ್ದಯುತ ವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶ ವನ್ನು ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ಜತೆ ಸಮೀಕರಿಸುವುದು ಸರಿಯಲ್ಲ. ನಮ್ಮಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿಲ್ಲ’ ಎಂದು ಬಾಂಗ್ಲಾ ವಿದೇಶಾಂಗ ಸಚಿವಾಲಯವು ಹೇಳಿಕೆ ನೀಡಿತು.

‘ಭಾರತದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇದ್ದರೆ, ಅವರನ್ನು ಇಲ್ಲಿಗೆ ಕಳುಹಿಸಿ. ನಾವು ಅವರನ್ನು ಸ್ವಾಗತಿಸುತ್ತೇವೆ. ಆದರೆ, ಅದಕ್ಕೂ ಮುನ್ನ ಅವರೆಲ್ಲರೂ ಬಾಂಗ್ಲಾದೇಶದವರೇ ಎಂಬುದನ್ನು ಭಾರತವು ಸಾಬೀತುಪಡಿಸಬೇಕು. ಭಾರತದಲ್ಲಿರುವ ಬಾಂಗ್ಲಾ ಅಕ್ರಮ ವಲಸಿಗರ ಪಟ್ಟಿ ನೀಡುವಂತೆ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ’ ಎಂದು ಬಾಂಗ್ಲಾ ಪ್ರಧಾನಿ ಕಾರ್ಯಾಲಯವು ಹೇಳಿತು.

ಬಾಂಗ್ಲಾ ಸಚಿವರು ಭಾರತಕ್ಕೆ ನೀಡಬೇಕಿದ್ದ ಭೇಟಿಗಳನ್ನು ಅನಿರ್ದಿಷ್ಟಾವಧಿ ವರೆಗೆ ಮುಂದೂಡಲಾಗಿದೆ. ದ್ವಿಪಕ್ಷೀಯ ಸಂಬಂಧ ಸುಧಾರಣೆ ಉದ್ದೇಶದ ಈ ಭೇಟಿಗಳು ಯಾವಾಗ ನಡೆಯುತ್ತವೆ ಎಂಬುದು ಅನಿಶ್ಚಿತವಾಗಿದೆ.

ಒಐಸಿ ಕಳವಳ
ಇಸ್ಲಾಮಿಕ್‌ ರಾಷ್ಟ್ರಗಳ ಒಕ್ಕೂಟವಾದ ‘ಇಸ್ಲಾಮಿಕ್‌ ಸಹಕಾರ ಸಂಘಟನೆಯು (ಒಐಸಿ)’, ‘ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸವಾಗಬೇಕು’ ಎಂದು ಹೇಳಿತ್ತು. ‘ಭಾರತದಲ್ಲಿನ ಬೆಳವಣಿಗೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ. ಈ ಬೆಳವಣಿಗೆಗಳು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಸ್ಥಿತಿಗತಿಯ ಮೇಲೆ ಪ್ರಭಾವ ಬೀರುತ್ತವೆ’ ಎಂದು ಒಐಸಿ ಕಳವಳ ವ್ಯಕ್ತಪಡಿಸಿತ್ತು.

ವಾಣಿಜ್ಯ ವಹಿವಾಟಿಗೆ ಧಕ್ಕೆ?: ಒಐಸಿ ಸದಸ್ಯರಲ್ಲಿ ಹಲವು ರಾಷ್ಟ್ರಗಳ ಜತೆ ಭಾರತವು ವಾಣಿಜ್ಯ ಸಂಬಂಧ ಹೊಂದಿದೆ. ಅಲ್ಲದೆ ಭಾರತವು, ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಜಗತ್ತಿನ ಮೂರನೇ ರಾಷ್ಟ್ರವಾಗಿದೆ. ಈ ಒಕ್ಕೂಟಕ್ಕೆ ಭಾರತವನ್ನು ಸೇರಿಸಬೇಕು ಎಂದು ಹಲವು ಸದಸ್ಯ ರಾಷ್ಟ್ರಗಳು ಒತ್ತಾಯಿಸುತ್ತಿವೆ. ಇದು ಭಾರತದ ವಾಣಿಜ್ಯ ವಹಿವಾಟಿನ ವೃದ್ಧಿಗೆ ಅನುಕೂಲವಾಗಲಿದೆ. ಈ ಉದ್ದೇಶದಿಂದಲೇ ಓಕ್ಕೂಟದ ಹಿಂದಿನ ಶೃಂಗಸಭೆಗೆ ಭಾರತವನ್ನು ಆಹ್ವಾನಿಸಲಾಗಿತ್ತು. 2019ರ ಫೆಬ್ರುವರಿಯಲ್ಲಿ ಅಬುಧಾಬಿಯಲ್ಲಿ ನಡೆದಿದ್ದ ಒಐಸಿ ಶೃಂಗಸಭೆಯಲ್ಲಿ ‘ಗೌರವಾನ್ವಿತ ಅತಿಥಿ’ಯಾಗಿ ಭಾರತದ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಗವಹಿಸಿದ್ದರು. ಆದರೆ, ಈಗ ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಒಐಸಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಒಕ್ಕೂಟದ ಜತೆ ಭಾರತದ ಸಂಬಂಧ ಹದಗೆಡುವ ಅಪಾಯವಿದೆ.

ಪಾಕ್‌ ಜತೆ ಹೋಲಿಸಬೇಡಿ: ಅಫ್ಗಾನಿಸ್ತಾನ
ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ಹೇಳಿಕೆಗೆ ಅಫ್ಗಾನಿಸ್ತಾನ ಅಸಮಾಧಾನ ವ್ಯಕ್ತಪಡಿಸಿದೆ. ‘ತಾಲಿಬಾನ್‌ನ ಪತನದ ನಂತರ ಅಫ್ಗಾನಿಸ್ತಾನದಲ್ಲಿ ಪರಿಸ್ಥಿತಿ ಬದಲಾಗಿದೆ. ನಮ್ಮಲ್ಲಿ ಸಿಖ್ ಸಮುದಾಯದವರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದೇವೆ. ನಮ್ಮ ಸಂಸತ್ತಿನ ಎರಡೂ ಸದನಗಳಲ್ಲಿ ಅವರಿಗೆ ಪ್ರಾತಿನಿಧ್ಯವಿದೆ. ಹೀಗಾಗಿ ನಮ್ಮನ್ನು ಪಾಕಿಸ್ತಾನದ ಜತೆ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಭಾರತದಲ್ಲಿನ ಅಫ್ಗಾನಿಸ್ತಾನ ರಾಯಭಾರ ಕಚೇರಿ ಹೇಳಿದೆ.

ವಿಶ್ವಸಂಸ್ಥೆ ತಾಕೀತು
ಧರ್ಮದ ಆಧಾರದಲ್ಲಿ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಮಾತ್ರ ಪೌರತ್ವ ನೀಡುವ ಭಾರತದ ನಡೆಯ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನ್ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಜನಾಂಗ, ಧರ್ಮ ಮತ್ತು ಜಾತಿಯ ಆಧಾರದಲ್ಲಿ ನಾಗರಿಕರಿಗೆ ಹಕ್ಕುಗಳನ್ನು ನಿರಾಕರಿಸುವುದನ್ನು ಭಾರತದ ಸಂವಿಧಾನವು ನಿಷೇಧಿಸುತ್ತದೆ. ಭಾರತದ ಸಂವಿಧಾನದಲ್ಲಿ ಸಮಾನತೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಸಮಾನತೆಯನ್ನು ಎತ್ತಿಹಿಡಿಯುವ ಭಾರತದ ಬದ್ಧತೆಗೆ, ಪೌರತ್ವ (ತಿದ್ದುಪಡಿ) ಕಾಯ್ದೆಯು ಧಕ್ಕೆ ತರುತ್ತದೆ. ಈ ಕಾಯ್ದೆಯ ಮೂಲದಲ್ಲೇ ತಾರತಮ್ಯವಿದೆ’ ಎಂದು ಹೈಕಮಿಷನ್ ಹೇಳಿದೆ.

‘ಸಂವಿಧಾನಕ್ಕೆ ಬದ್ಧವಾಗಿರಲಿ’
ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಕ್ಕೆ ಮುನ್ನವೇ ಐರೋಪ್ಯ ಒಕ್ಕೂಟವು ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ‘ಭಾರತ ಮತ್ತು ಐರೋಪ್ಯ ರಾಷ್ಟ್ರಗಳು ಧಾರ್ಮಿಕ ಅಸಮಾನತೆಯನ್ನು ನಿರಾಕರಿಸುತ್ತವೆ. ಪೌರತ್ವ (ತಿದ್ದುಪಡಿ) ಮಸೂದೆಯು ಭಾರತದ ಸಂವಿಧಾನಕ್ಕೆ ಬದ್ಧವಾಗಿರುತ್ತದೆ ಎಂದು ನಿರೀಕ್ಷಿಸಿದ್ದೇವೆ’ ಎಂದು ಐರೋಪ್ಯ ಒಕ್ಕೂಟವು ಹೇಳಿಕೆ ನೀಡಿತ್ತು.

ನಮಗೂ ಪೌರತ್ವ ನೀಡಿ: ಶ್ರೀಲಂಕಾ ತಮಿಳರ ಆಗ್ರಹ
ಶ್ರೀಲಂಕಾ ತಮಿಳು ಅಕ್ರಮ ವಲಸಿಗರನ್ನು ಈ ಕಾಯ್ದೆಯಿಂದ ಹೊರಗೆ ಇರಿಸಿರುವುದು ಈ ಸಮುದಾಯದ ಜನರ ತೀವ್ರ ಕಳವಳ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಲಂಕಾ ತಮಿಳು ಹಿಂದೂಗಳ ಹಕ್ಕುಗಳ ರಕ್ಷಣೆ ದೃಷ್ಟಿಯಿಂದ ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ‘ಶ್ರೀಲಂಕಾ ಶಿವ ಸೇನೈ’, ಭಾರತ ಸರ್ಕಾರದ ಈ ನಡೆಯನ್ನು ಖಂಡಿಸಿದೆ. ‘1983ರಿಂದ 3 ಲಕ್ಷಕ್ಕೂ ಹೆಚ್ಚು ತಮಿಳು ಹಿಂದೂಗಳು ಭಾರತಕ್ಕೆ ನಿರಾಶ್ರಿತರಾಗಿ ಹೋಗಿದ್ದಾರೆ. ಇವರಲ್ಲಿ 1 ಲಕ್ಷಕ್ಕೂ ಹೆಚ್ಚು ಹಿಂದೂಗಳು ಭಾರತದ ನಿರಾಶ್ರಿತ ಶಿಬಿರಗಳಲ್ಲಿ ಇದ್ದಾರೆ. ಈ ಕಾಯ್ದೆಯಿಂದ ಇವರನ್ನು ಹೊರಗೆ ಇಟ್ಟರೆ, ಇವರೆಲ್ಲಾ ನಿರಾಶ್ರಿತರಾಗಿಯೇ ಇರಬೇಕಾಗುತ್ತದೆ’ ಎಂದು ಸೇನೈ ಕಳವಳ ವ್ಯಕ್ತಪಡಿಸಿದೆ.

‘25 ಲಕ್ಷಕ್ಕೂ ಹೆಚ್ಚು ತಮಿಳು ಹಿಂದೂಗಳು ಬೇರೆ–ಬೇರೆ ದೇಶಗಳಿಗೆ ನಿರಾಶ್ರಿತರಾಗಿ ಹೋಗಿದ್ದಾರೆ. ಅವರಿಗೆಲ್ಲಾ ಆಯಾ ದೇಶಗಳ ಪೌರತ್ವ ದೊರಕಿದೆ. ಆದರೆ, ಭಾರತದಲ್ಲಿ ಮಾತ್ರ ಪೌರತ್ವ ದೊರೆತಿಲ್ಲ. ಹೀಗಾಗಿ ಶ್ರೀಲಂಕಾ ತಮಿಳು ಹಿಂದೂಗಳನ್ನೂ ಈ ಕಾಯ್ದೆಗೆ ಸೇರಿಸಬೇಕು’ ಎಂದು ಈ ಸಂಘಟನೆಯು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT