ಪುಣೆ: ಬುಧವಾರ ರಾತ್ರಿಯಿಂದ ಪುಣೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಏಳು ಮಂದಿ ಸಾವಿಗೀಡಾಗಿದ್ದಾರೆ. ಗುರುವಾರ ಬೆಳಗ್ಗೆ ಮಳೆ ಕಡಿಮೆಯಾಗಿದೆ. ಮಳೆಯ ಕಾರಣ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಪುಣೆ ಮತ್ತು ಹತ್ತಿರದ ತಾಲ್ಲೂಕುಗಳಾದಪುರಂದರ್, ಭೋರ್, ಬಾರಾಮತಿ ಮತ್ತು ಹವೇಲಿಯಲ್ಲಿರುವ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ ಎಂದು ಪುಣೆ ಜಿಲ್ಲಾಧಿಕಾರಿ ಹೇಳಿದ್ದಾರೆ.
ಪುಣೆಯ ಪರ್ವತಿ- ಅರಣ್ಯೇಶ್ವರ ಪ್ರದೇಶದಲ್ಲಿ ಐದು ಮೃತದೇಹಗಳನ್ನು ರಕ್ಷಣಾ ತಂಡ ಪತ್ತೆ ಹಚ್ಚಿದ್ದು, ಸಿಂಗ್ನಾಬಾದ್ ರಸ್ತೆಯಲ್ಲಿ ಮಳೆ ನೀರಲ್ಲಿ ಕೊಚ್ಚಿ ಹೋದ ಕಾರಿನೊಳಗೊಂದು ಮತ್ತು ಶಂಕರ್ನಗರ್ ಕಾಲುವೆಯಲ್ಲಿ ಮತ್ತೊಂದು ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.
ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ತಂಗೆವಲಿ ಕಾಲೊನಿಯಲ್ಲಿ ಆವರಣ ಗೋಡೆಯೊಂದು ಕುಸಿದು 5 ಮಂದಿ ಸಾವಿಗೀಡಾಗಿದ್ದಾರೆ. ಹತ್ತಿರದ ಕಾಲುವೆಯಲ್ಲಿ ಅಧಿಕ ಮಟ್ಟದಲ್ಲಿ ನೀರು ಹರಿಯುತ್ತಿದ್ದುದರಿಂದ ಆವರಣ ಗೋಡೆ ಕುಸಿದಿದೆ. ಈ ಪ್ರಕರಣದಲ್ಲಿ 3-4 ಮಂದಿ ನಾಪತ್ತೆಯಾಗಿದ್ದಾರೆ.