ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳ ಸುಮಾರು 100 ಜಿಲ್ಲೆಗಳ ಮೇಲೆ ಲಕ್ಷಾಂತರ ಮಿಡತೆಗಳು ದಾಳಿ ಮಾಡಿದ್ದು, ಮುಂದಿನ ಕೆಲವು ವಾರಗಳಲ್ಲಿ ದೇಶದ 12 ರಾಜ್ಯಗಳಿಗೆ ತಲುಪಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪಾಕಿಸ್ತಾನದಿಂದ ಮತ್ತೊಂದು ಮಿಡತೆ ಸಮೂಹವು ಜೂನ್ ಮಧ್ಯಭಾಗದಲ್ಲಿ ಭಾರತವನ್ನು ಪ್ರವೇಶಿಸುವ ನಿರೀಕ್ಷೆಯಿದೆ, ಇದು ಭಾರತದಲ್ಲಿ ಮಿಡತೆಗಳ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ದಾಳಿಯಿಟ್ಟಿರುವ ಮರಭೂಮಿಯ ಸಣ್ಣ-ಕೊಂಬಿನ ಮಿಡತೆ ಸಮೂಹ, ಹಾದಿಯಲ್ಲಿರುವ ಎಲ್ಲ ರೀತಿಯ ಆಹಾರ ಧಾನ್ಯಗಳನ್ನು ತಿನ್ನುತ್ತದೆ. ಇದು ಲಕ್ಷಾಂತರ ಜನರ ಜೀವನೋಪಾಯಕ್ಕೆ ಆತಂಕ ಒಡ್ಡಲಿದೆ ಎಂದು ಹೇಳಿದ್ದಾರೆ.
ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಮಿಡತೆಗಳು ಒಂದು ದಿನಕ್ಕೆ 150 ಕಿ.ಮೀ ವರೆಗೆ ಹಾರಿ, 35,000 ಜನರು ತಿನ್ನುವಷ್ಟು ಆಹಾರವನ್ನು ಸೇವಿಸಬಲ್ಲವು.
ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಉತ್ತರಾಖಂಡ, ತೆಲಂಗಾಣ ಮತ್ತು ಕರ್ನಾಟಕದ ಅಧಿಕಾರಿಗಳು ತಮ್ಮ ಪ್ರದೇಶಗಳಿಗೆ ಈ ಅಪಾಯಕಾರಿ ಮಿಡತೆಗಳು ಪ್ರವೇಶಿಸುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ.