ನವದೆಹಲಿ: ದೇಶದಲ್ಲಿ ಕೋವಿಡ್–19 ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಭಾರತಕ್ಕೆ ಬರುವ ಎಲ್ಲಾ ಪ್ರವಾಸಿಗರ ವೀಸಾಗಳನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಕೋವಿಡ್–19ನಿಂದ ಹೆಚ್ಚು ಪೀಡಿತವಾಗಿರುವ ಚೀನಾ, ಇಟಲಿ, ದಕ್ಷಿಣ ಕೊರಿಯಾ, ಫ್ರಾನ್ಸ್, ಜರ್ಮನಿ, ಸ್ಪೇನ್ನಿಂದ ಬರುವಭಾರತೀಯರು ಮತ್ತು ವಿದೇಶಿಯರು ಮೇಲೆ ಭಾರತ ನಿರ್ಬಂಧ ಹೇರಿದೆ. ಮಾರ್ಚ್ 11ವರೆಗೆ ನೀಡಿದ್ದ ವೀಸಾವನ್ನು ಸರ್ಕಾರ ರದ್ದು ಮಾಡಿದೆ.
ಭಾರತದಲ್ಲಿ ಈವರೆಗೆ ಕೋವಿಡ್–19 ಪೀಡಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ದೆಹಲಿ ಮತ್ತು ರಾಜಸ್ಥಾನದಲ್ಲಿ ಎರಡು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ವೀಸಾ ಅಮಾನತು ಆದೇಶ ಮಾರ್ಚ್ 13ರಂದು 1200 ಜಿಎಂಟಿ ಕಾಲಮಾನದ ಪ್ರಕಾರ ಜಾರಿಗೆ ಬರಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ರಾಜತಾಂತ್ರಿಕ, ಅಂತರರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ ಮತ್ತು ಯೋಜನಾ ವೀಸಾಗಳಿಗೆ ವಿನಾಯಿತಿ ನೀಡಲಾಗಿದೆ.
ಫೆಬ್ರುವರಿ 15ರ ನಂತರ ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿಯಿಂದ ಆಗಮಿಸಿದ ಅಥವಾ ಭೇಟಿ ನೀಡಿದ ಭಾರತೀಯ ಪ್ರಜೆಗಳೂಸೇರಿದಂತೆ ಎಲ್ಲಾ ಪ್ರಯಾಣಿಕರನ್ನು ಕನಿಷ್ಠ 14 ದಿನಗಳವರೆಗೆ ನಿರ್ಬಂಧಿಸಲಾಗುತ್ತದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರೋಗ್ಯ ಸಚಿವ ಹರ್ಷವರ್ಧನ್ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.