ನವದೆಹಲಿ: ತಮ್ಮ ಕುಟುಂಬದ ಭದ್ರಕೋಟೆ ಮಧ್ಯ ಪ್ರದೇಶದ ಗುಣಾದಿಂದ ಕಾಂಗ್ರೆಸ್ನ ಯುವ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಪಂಜಾಬ್ನ ಆನಂದಪುರ ಸಾಹಿಬ್ ಕ್ಷೇತ್ರದಿಂದ ಮನೀಶ್ ತಿವಾರಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಚಂಡಿಗಡ ಕ್ಷೇತ್ರದಿಂದ ಸ್ಪರ್ಧಿಸಲು ತಿವಾರಿ ಬಯಸಿದ್ದರು. ಆದರೆ, ಕೇಂದ್ರದ ಮಾಜಿ ಸಚಿವ ಪವನ್ ಕುಮಾರ್ ಬನ್ಸಾಲ್ ಅವರಿಗೆ ಇಲ್ಲಿಂದ ಟಿಕೆಟ್ ನೀಡಲಾಗಿದೆ. 2014ರಲ್ಲಿ ಈ ಕ್ಷೇತ್ರದಲ್ಲಿ ಬನ್ಸಾಲ್ ಅವರು ಬಿಜೆಪಿಯ ಕಿರಣ್ ಖೇರ್ ವಿರುದ್ಧ ಸೋತಿದ್ದರು.
ಲೋಕಸಭೆಯ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷವು ಶುಕ್ರವಾರ ಪಟ್ಟಿ ಬಿಡುಗಡೆ ಮಾಡಿದೆ.
ಪಂಜಾಬ್ನ ಬರ್ನಾಲಾದ ಮಾಜಿ ಶಾಸಕ ಕೇವಲ್ ಸಿಂಗ್ ಧಿಲ್ಲೋನ್ ಅವರು ಸಂಗ್ರೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಎಎಪಿಯ ಭಗವಂತ ಮಾನ್ ಅವರು ಇಲ್ಲಿನ ಹಾಲಿ ಸಂಸದ. ಪಂಜಾಬ್ನ ಮಾಜಿ ಸಚಿವ ಪರಮಿಂದರ್ ಸಿಂಗ್ ಧಿಂಡ್ಸಾ ಅವರು ಇಲ್ಲಿ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿಯಾಗಿದ್ದಾರೆ.