ನವದೆಹಲಿ:ಗೂಢಚರ್ಯೆ ನಡೆಸಿದ ಆರೋಪದಲ್ಲಿ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಯಾವುದೇ ‘ನಿರ್ಬಂಧ’ ಇಲ್ಲದೇ ಕಾನ್ಸಲ್ ನೆರವು ನೀಡಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಶುಕ್ರವಾರ ತಿಳಿಸಿದೆ.
‘ಜಾಧವ್ ಅವರು ಭೀತಿಗೆ ಒಳಗಾಗುವಂತಹ ವಾತಾವರಣ ಇರಬಾರದು. ಕಾನ್ಸಲ್ ಅಧಿಕಾರಿಗಳ ಜತೆಗೆ ಅವರು ನಡೆಸಿದ ಮಾತುಕತೆ ಆಧಾರದಲ್ಲಿ ಪ್ರತೀಕಾರ ತೀರಿಸಿಕೊಳ್ಳಬಾರದು’ ಎಂದು ಭಾರತ ಸ್ಪಷ್ಟಪಡಿಸಿದೆ.
ಕಾನ್ಸಲ್ ನೆರವು ನೀಡುವುದಾಗಿ ಹೇಳಿರುವ ಪಾಕಿಸ್ತಾನ ಕೆಲವು ಷರತ್ತುಗಳನ್ನು ವಿಧಿಸಿದೆ. ಭಾರತದ ಅಧಿಕಾರಿಗಳು ಹಾಗೂ ಜಾಧವ್ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನದ ಅಧಿಕಾರಿಗಳು ಹಾಜರಿರುತ್ತಾರೆ ಎಂಬ ಷರತ್ತು ಹಾಕಿದೆ.
ಪಾಕಿಸ್ತಾನದ ಸೇನಾ ನ್ಯಾಯಾಲಯವು ಅವರಿಗೆ ಮರಣದಂಡನೆ ಘೋಷಿಸಿದೆ. ಆದರೆ ಈ ಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವು ಆದೇಶ ನೀಡಿದೆ.
ಜಾಧವ್ ಅವರನ್ನು ಭೇಟಿ ಮಾಡಲು ಮತ್ತು ಅಗತ್ಯ ಕಾನ್ಸಲ್ ನೆರವು ನೀಡಲು ಅವಕಾಶ ನೀಡಬೇಕು ಎಂದು ಭಾರತ ಹಲವು ಬಾರಿ ಮನವಿ ಮಾಡಿಕೊಂಡಿತ್ತು. ಪಾಕಿಸ್ತಾನ ಇದಕ್ಕೆ ಪೂರಕವಾಗಿ ಸ್ಪಂದಿಸಿರಲಿಲ್ಲ.
ಆದರೆ ಕಾನ್ಸಲ್ ನೆರವಿಗೆ ಅವಕಾಶ ನೀಡಬೇಕು ಎಂದು ಅಂತರರಾಷ್ಟ್ರೀಯ ನ್ಯಾಯಾಲಯವು ಜುಲೈ 16ರ ತನ್ನ ತೀರ್ಪಿನಲ್ಲಿ ಆದೇಶಿಸಿತ್ತು.