ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಿಸುವುದನ್ನು ತಡೆಹಿಡಿದಿರುವ ನಿರ್ಧಾರವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.
ಈ ಹಂತದಲ್ಲಿ ತಡೆ ನೀಡುವುದು ಅಗತ್ಯವಿರಲಿಲ್ಲ. ನೌಕರರು ಮತ್ತು ರಕ್ಷಣಾ ಸಿಬ್ಬಂದಿಯನ್ನು ಸಂಕಷ್ಟಕ್ಕೆ ದೂಡುವುದು ಸರಿ ಅಲ್ಲ ಎಂದು ಶನಿವಾರ ನಡೆದ ಕಾಂಗ್ರೆಸ್ನ ಸಮಾಲೋಚನೆ ಸಭೆಯಲ್ಲಿ ತಿಳಿಸಿದ್ದಾರೆ.
ಕೋವಿಡ್–19 ಸಂಕಷ್ಟದ ಹಿನ್ನೆಲೆಯಲ್ಲಿ 2021ರ ಜೂನ್ವರೆಗೆ 50 ಲಕ್ಷ ನೌಕರರು ಮತ್ತು 61 ಲಕ್ಷ ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಹೆಚ್ಚಿಸದಿರಲು ಕೇಂದ್ರ ಸರ್ಕಾರ ಇತ್ತೀಚೆಗೆ ನಿರ್ಧರಿಸಿತ್ತು.
‘ಮಧ್ಯಮ ವರ್ಗದ ಜನತೆಯಿಂದ ಸರ್ಕಾರ ಹಣವನ್ನು ಕಸಿದುಕೊಳ್ಳುತ್ತಿದೆ. ಬಡವರಿಗೂ ನೀಡುತ್ತಿಲ್ಲ. ಈ ಹಣವನ್ನು ಬೃಹತ್ ಯೋಜನೆಗಳ ಮೇಲೆ ಸುರಿಯುತ್ತಿದೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಬುಲೆಟ್ ರೈಲ್ವೆಯಂತಹ ಬೃಹತ್ ಯೋಜನೆಗಳ ಮೇಲೆ ವೆಚ್ಚ ಮಾಡುವುದನ್ನು ಮೊದಲು ನಿಲ್ಲಿಸಿ. ನಂತರ, ತುಟ್ಟಿ ಭತ್ಯೆಗೆ ತಡೆ ನೀಡುವ ಬಗ್ಗೆ ಯೋಚಿಸಿ’ ಎಂದು ಚಿದಂಬರಂ ಹೇಳಿದ್ದಾರೆ.