ನವದೆಹಲಿ: ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ರಾವತ್ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಳ್ಳುವರು.
ಭೂಸೇನಾ ಮುಖ್ಯಸ್ಥ ಹುದ್ದೆಯಿಂದ ನಿವೃತ್ತಿಯಾಗಲಿರುವ ಜ. ಬಿಪಿನ್ ರಾವತ್ ಅವರು ‘ರಕ್ಷಣಾ ಪಡೆಗಳ ಮುಖ್ಯಸ್ಥ’ರಾಗಿ (ಸಿಡಿಎಸ್) ನೇಮಕಗೊಂಡಿದ್ದಾರೆ.
ಲೆಫ್ಟಿನೆಂಟ್ ಜನರಲ್ ನರವಾಣೆ ಅವರಿಗೀಗ 59ರ ಹರೆಯ. ಸೇನೆಯ ಉಪ ಮುಖ್ಯಸ್ಥರಾಗುವ ಮೊದಲು ಕೊಲ್ಕತ್ತಾದಲ್ಲಿ ಪ್ರಧಾನ ಕಚೇರಿಯಿರುವ ಭೂಸೇನೆಯ ಪೂರ್ವ ಕಮಾಂಡ್ನ ಕಮಾಂಡರ್ ಆಗಿದ್ದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ವಿರುದ್ಧದ ಕಾರ್ಯಾಚರಣೆಗಳ ತಂತ್ರದ ರೂವಾರಿಯಾಗಿದ್ದರು.
39 ವರ್ಷಗಳ ಸೇವಾ ಅವಧಿಯಲ್ಲಿ ಹತ್ತು ಹಲವು ಉನ್ನತ ಹುದ್ದೆಗಳನ್ನು ನರವಾಣೆ ನಿರ್ವಹಿಸಿದ್ದಾರೆ. ಜೂನ್ 1980ರಲ್ಲಿ ಸಿಖ್ ರೆಜಿಮೆಂಟ್ನಲ್ಲಿ ಕೆಲಸ ಆರಂಭಿಸಿದ್ದ ನರವಾಣೆ ಶಾಂತಿಪಾಲನಾ ಪಡೆಯೊಂದಿಗೆ ಶ್ರೀಲಂಕಾದಲ್ಲೂ ಕಾರ್ಯನಿರ್ವಹಿಸಿದ್ದಾರೆ. ಕೆಲ ಕಾಲ ಮ್ಯಾನ್ಮಾರ್ನಲ್ಲಿಯೂ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ನರವಾಣೆ ಅವರ ಸೇವೆಗೆ ಹಲವು ಗೌರವಗಳೂ ಸಂದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯುತ್ತಮ ಬೆಟಾಲಿಯನ್ ನಿರ್ವಹಣೆಗಾಗಿ ಸೇನಾ ಪದಕ, ನಾಗಾಲ್ಯಾಂಡ್ನಲ್ಲಿ ಅಸ್ಸಾಂ ರೈಫಲ್ಸ್ನ ಇನ್ಸ್ಪೆಕ್ಟರ್ ಜನರಲ್ ಆಗಿ ಸಲ್ಲಿಸಿದ ಸೇವೆಗೆ ವಿಶಿಷ್ಟ ಸೇವಾ ಪದಕ, ಸ್ಟ್ರೈಕ್ ಕಾರ್ಪ್ಸ್ ಮುನ್ನಡೆಸಿದ್ದಕ್ಕಾಗಿ ಅತಿ ವಿಶಿಷ್ಟ ಸೇವಾ ಪದಕ ಲಭಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.