ನವದೆಹಲಿ: ಮೇಕೆದಾಟು ಯೋಜನೆ ವಿರೋಧಿಸಿ ಪ್ರತಿಭಟನೆ ಮುಂದುವರಿಸಿರುವ ಎಐಎಡಿಎಂಕೆ ಸಂಸದರ ಅಮಾನತು ಆದೇಶ ತೆರವುಗೊಳಿಸುವಂತೆ ಲೋಕಸಭೆಯ ಉಪಸಭಾಧ್ಯಕ್ಷ ಎಂ.ತಂಬಿದುರೈ ಅವರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಕೋರಿದರು.
ಸೋಮವಾರ ಮತ್ತೆ ಪ್ರತಿಭಟನೆ ನಡೆಸಿದ ಎಐಎಡಿಎಂಕೆಯ ಕೆ.ಎನ್. ರಾಮಚಂದ್ರನ್, ಪಿ.ವೇಣುಗೋಪಾಲ್ ಹಾಗೂ ಕೆ.ಕೆ. ಗೋಪಾಲ್ ಹಾಗೂ ವಿಶೇಷ ಸ್ಥಾನಮಾನ ಕೋರಿದ ಆಂಧ್ರದ ತೆಲುಗು ದೇಶಂ ಪಕ್ಷದ ಎನ್.ಶಿವಪ್ರಸಾದ್ ಅವರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅಮಾನತುಗೊಳಿಸಿದರು.
ತಮಿಳುನಾಡಿನ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕ ಮೇಕೆದಾಟು ಯೋಜನೆ ಆರಂಭಿಸುತ್ತಿದೆ ಎಂದು ತಂಬಿದುರೈ ಹೇಳಿದರು. ಕೇಂದ್ರ ಜಲಸಂಪನ್ಮೂಲ ಸಚಿವರು ಸ್ಪಷ್ಟನೆ ನೀಡಿದ್ದರೂ ಪ್ರತಿಭಟಿಸುವುದು ಸರಿಯಲ್ಲ ಎಂದು ಈ ವೇಳೆ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಹೇಳಿದರು.