ನವದೆಹಲಿ:ಕೇರಳದಲ್ಲಿ ವ್ಯಕ್ತಿಯೊಬ್ಬರಲ್ಲಿ ನಿಫಾ ವೈರಸ್ ಪತ್ತೆಯಾಗಿದ್ದು, ರಾಜ್ಯಕ್ಕೆ ಬೇಕಾದ ಎಲ್ಲಾ ನೆರವನ್ನು ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಈ ಸಂಬಂಧ ಕೇರಳ ಆರೋಗ್ಯ ಸಚಿವರೊಟ್ಟಿಗೆ ಮಾತನಾಡಿ, ಭರವಸೆ ನೀಡಿದ್ದೇನೆ ಎಂದು ಮಂಗಳವಾರ ಹೇಳಿದ್ದಾರೆ.
ವೈರಸ್ ಪತ್ತೆ ಕುರಿತಾಗಿ ಬಾವಲಿಗಳನ್ನು ಪರೀಕ್ಷೆಗೊಳಪಡಿಸುವ ಕುರಿತು ವನ್ಯಜೀವಿ ಇಲಾಖೆಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ವೈರಸ್ ಪತ್ತೆ ವಿಷಯ ತಿಳಿಯುತ್ತಿದ್ದಂತೆ ನಮ್ಮ ನಿವಾಸದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಗಳ ಸಭೆ ನಡೆಸಿದ್ದೇನೆ. ಸೋಮವಾರ ಆರು ಜನ ಅಧಿಕಾರಿಗಳ ತಂಡವನ್ನು ಕೇರಳಕ್ಕೆ ಕಳುಹಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ವೈರಸ್ ದೃಢ
ರಾಜ್ಯದಲ್ಲಿ ವ್ಯಕ್ತಿಯೊಬ್ಬರಿಗೆ ನಿಫಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಂಗಳವಾರ ಹೇಳಿದ್ದಾರೆ.
ಕೊಚ್ಚಿಯ ಎರ್ನಾಕುಳಂನ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವ ಸಂಬಂಧ ರಕ್ತ ಮಾದರಿಯನ್ನು ಪುಣೆಯ ವೈರಾಲಜಿ ಇನ್ಸ್ಟಿಟ್ಯೂಟ್ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ವೈರಸ್ ಇರುವುದು ವರದಿಯಲ್ಲಿ ದೃಢಪಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.