ನವದೆಹಲಿ: ಮದ್ಯ ಮಾರಾಟಕ್ಕೆ ನೀಡಿರುವ ಅನುಮತಿಯನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ವಕೀಲ ರಾಜೀವ್ ಕುಮಾರ್ ರಂಜನ್ ಎಂಬುವರು ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
‘ಮದ್ಯ ಮಾರಾಟ ಆರಂಭಿಸಿದ್ದರಿಂದ ಜನರು ದೊಡ್ಡ ಪ್ರಮಾಣದಲ್ಲಿ ಗುಂಪು ಕೂಡುತ್ತಿದ್ದಾರೆ. ಇದರಿಂದಾಗಿ ಲಾಕ್ಡೌನ್ನ ಉದ್ದೇಶವೇ ವಿಫಲವಾಗುವ ಅಪಾಯವಿದೆ’ ಎಂದು ಮನವಿಯಲ್ಲಿ ಹೇಳಿದ್ದಾರೆ.
‘ಪ್ರತಿಯೊಬ್ಬನಿಗೂ ಜೀವಿಸುವ ಹಕ್ಕನ್ನು ನೀಡುವ, ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯೂ ಆಗಲಿದೆ’ ಎಂದೂ ವಾದಿಸಿದ್ದಾರೆ.