ವಾರಾಣಸಿ: ‘ಎಷ್ಟೇಒತ್ತಡಗಳು ಬಂದರೂ ಸರಿಯೇ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ವಿಧಿ ರದ್ದು ಮಾಡಿದ ನಿರ್ಧಾರದ ಪುನರ್ ಪರಿಶೀಲನೆಮಾತೇ ಇಲ್ಲ. ನಮ್ಮ ನಿರ್ಧಾರಕ್ಕೆ ನಾವು ಅಚಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಾವು ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಾಣಸಿ ಲೋಕಸಭೆ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ್ದ ಅವರು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ ಸಂವಿಧಾನದ 370ನೇ ವಿಧಿ ರದ್ದು ಮಾಡುವುದರಿಲಿ, ಸಿಎಎ ಜಾರಿಗೆ ತರುವುದಿರಲಿ... ಇವುಗಳಿಗಾಗಿ ದೇಶ ಈ ವರೆಗೆ ಕಾದಿದೆ,’ ಎಂದು ಹೇಳಿದರು.
‘ದೇಶದ ಹಿತಕ್ಕಾಗಿ ಈ ನಿರ್ಧಾರಗಳು ಅತ್ಯಗತ್ಯ. ಎಲ್ಲ ಕಡೆಗಳಿಂದ ಒತ್ತಡಗಳು ಬಂದರೂ ನಮ್ಮ ನಿರ್ಧಾರಕ್ಕೆ ನಾವು ಬದ್ಧ. ಈ ನಿಟ್ಟಿನಲ್ಲಿ ನಾವು ಮುಂದುವರಿಯುತ್ತೇವೆ,’ ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.
ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಕುರಿತು ಮಾತನಾಡಿದ ಅವರು, ‘ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚನೆ ಮಾಡಲಾಗಿದೆ. ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯಲಿದೆ’ ಎಂದೂ ಅವರು ಭರವಸೆ ನೀಡಿದರು.