ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ: ಅಧಿರ್ ‘ದುರ್ಬಲ’ ಜಟಾ‍ಪಟಿ

Last Updated 3 ಡಿಸೆಂಬರ್ 2019, 16:44 IST
ಅಕ್ಷರ ಗಾತ್ರ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ‘ನಿರ್ಬಲ’ (ದುರ್ಬಲ) ಸೀತಾರಾಮನ್ ಎಂದು ಟೀಕಿಸಿದ್ದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ಅಧಿರ್ ಹೇಳಿಕೆ ಖಂಡಿಸಿ ಬಿಜೆಪಿ ಸದಸ್ಯರು ಲೋಕಸಭೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ‘ಆರೋಪ ಮಾಡುತ್ತಿರುವ ಅಧಿರ್ ರಂಜನ್ ಚೌಧರಿ ಅವರು ದುರ್ಬಲರೇ ವಿನಾ ನಿರ್ಮಲಾ ಅಲ್ಲ’ ಎಂದು ಸಂಸದೆ ಪೂನಂ ಮಹಾಜನ್ ಹೇಳಿದರು.

ಈರುಳ್ಳಿ ಬೆಲೆ ಏರಿಕೆ ಬಗ್ಗೆ ಅಧಿರ್ ಅವರುವಿಷಯ ಪ್ರಸ್ತಾಪಿಸಿದರು. ಪ್ರಧಾನಿ, ಗೃಹಸಚಿವ ಹಾಗೂ ಹಣಕಾಸು ಸಚಿವೆಯ ವಿರುದ್ಧ ಹೇಳಿಕೆ ನೀಡಿರುವ ಅಧಿರ್ ಕ್ಷಮೆ ಕೇಳಬೇಕು ಎಂದು ಸಂಸದೀಯ ವ್ಯವಹಾರ ಸಚಿವ ಅರ್ಜುನ್ ರಾಮ್ ಮೇಘವಾಲ್ ಆಗ್ರಹಿಸಿದರು. ಮಾತಿಕ ಚಕಮಕಿಯ ನಡುವೆಯೇ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.ಚರ್ಚೆಯ ವೇಳೆ ಸದಸ್ಯರು ಬಳಸಿದ ಅಸಾಂವಿಧಾನಿಕ ಪದಗಳನ್ನು ಕಡತದಿಂದ ತೆಗೆದುಹಾಕಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

4 ವೈದ್ಯಕೀಯ ಉಪಕರಣಗಳಿಗೆ ದರ ನಿಗದಿ

ಕಾರ್ಡಿಯಾಕ್ ಸ್ಟೆಂಟ್, ಡ್ರಗ್ ಎಲ್ಯೂಟಿಂಗ್ ಸ್ಟೆಂಟ್, ಕಾಂಡೊಮ್ ಹಾಗೂ ಇಂಟ್ರಾ ಯುಟೇರಿನ್– ಈ ನಾಲ್ಕು ವೈದ್ಯಕೀಯ ಉಪಕರಣಗಳನ್ನು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಗೆ ಸೇರಿಸಲಾಗಿದ್ದು, ಅವುಗಳ ಬೆಲೆಯನ್ನು ನಿಗದಿಪಡಿಸಲಾಗಿದೆ.

ಲೋಕಸಭೆಗೆ ಈ ಮಾಹಿತಿ ನೀಡಿದ ಸಚಿವ ಮನಸುಖ್ ಎಲ್. ಮಾಂಡವೀಯ ಅವರು, 20ಕ್ಕೂ ಹೆಚ್ಚು ಔಷಧಿ ಹಾಗೂ ವೈದ್ಯಕೀಯ ಉಪಕರಣಗಳನ್ನು ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವುದನ್ನು ತಡೆಯಲು ಔಷಧಿ ದರ ಪ್ರಾಧಿಕಾರ ನಿಗಾ ವಹಿಸಿದೆ ಎಂದರು.

ಸ್ಪಷ್ಟನೆ ಕೇಳಿದ ಶಿವಸೇನಾ:₹40 ಸಾವಿರ ಕೋಟಿ ಅನುದಾನವನ್ನುಮಹಾರಾಷ್ಟ್ರದಿಂದ ಕೇಂದ್ರ ಸರ್ಕಾರಕ್ಕೆ ವಾಪಸ್ ಕಳುಹಿಸಿದ ಬಗ್ಗೆ ಸಂಸದ ಅನಂತ್‌ಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ಶಿವಸೇನಾ ಆಗ್ರಹಿಸಿದೆ.

ಅನುದಾನ ವಾಪಸ್ ಕಳುಹಿಸಲಾಗಿದೆಯೇ ಎಂಬುದನ್ನು ಹಣಕಾಸು ಸಚಿವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಲಾಯಿತು.

ಹಾಜರಾತಿ ಕಡ್ಡಾಯ: ಸೂಚನೆ

‘ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ವೇಳೆ ಎಲ್ಲ ಸಂಸದರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು’ ಎಂದು ಸಚಿವ ರಾಜನಾಥ್ ಸಿಂಗ್ ಅವರು ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ರದ್ದತಿ ಮಸೂದೆ ಮಂಡನೆಯಷ್ಟೇ ಮಹತ್ವ ಪೌರತ್ವ ತಿದ್ದುಪಡಿ ಮಸೂದೆಗೂ ಇದೆ’ ಎಂದು ಅವರು ಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಹೇಳಿದ್ದಾರೆ. ಬರುವ ದಿನಗಳಲ್ಲಿ ಮಹತ್ವದ ಮಸೂದೆಗಳು ಮಂಡನೆಯಾಗಲಿವೆ. ಸದನದಲ್ಲಿ ಹಾಜರಾತಿ ಕೊರತೆ ಬಗ್ಗೆ ಪ್ರಧಾನಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ರಾಜನಾಥ್ ಹೇಳಿದ್ದಾರೆ.

ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವುದನ್ನು ಮಸೂದೆ ಪ್ರಸ್ತಾಪಿಸುತ್ತದೆ. ಮಸೂದೆ ಕುರಿತು ಪ್ರತಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿರುವ ರಾಜನಾಥ್, ‘ದೇಶವನ್ನು ಒಗ್ಗೂಡಿಸಲುಬಿಜೆಪಿ ಸದಾ ಕೆಲಸ ಮಾಡುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT