ತಿರುವನಂತಪುರಂ: ಅಣೆಕಟ್ಟಿನ ಕಳಪೆ ನಿರ್ವಹಣೆಯಿಂದಾಗಿ ಕೇರಳದಲ್ಲಿ ಪ್ರವಾಹವುಂಟಾಗಿದ್ದು ಎಂದು ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಹೇಳಿದ್ದಾರೆ.
ಪ್ರಳಯಕ್ಕೆ ಕಾರಣ ಏನೆಂದು ಪತ್ತೆ ಹಚ್ಚಲು ನ್ಯಾಯಾಂಗ ತನಿಖೆ ನಡೆಸಬೇಕು. ಅಣೆಕಟ್ಟುಗಳನ್ನು ತೆರೆದು ಬಿಡುವಾಗ ಮಾನದಂಡಗಳನ್ನು ಪಾಲಿಸಿಲ್ಲ ಎಂದು ಅಮಿಕಸ್ ಕ್ಯೂರಿ ಜೇಕಬ್ ಪಿ ಅಲೆಕ್ಸ್ ಹೈಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.
49 ಪುಟಗಳ ವಿಸ್ತೃತ ವರದಿ ಹೈಕೋರ್ಟ್ಗೆ ಸಲ್ಲಿಸಲಾಗಿದೆ.ಮಾನದಂಡಗಳನ್ನು ಪಾಲಿಸದೆ, ಯಾವುದೇ ಮುನ್ಸೂಚನೆಗಳನ್ನು ನೀಡದೆಯೇ ಅಣೆಕಟ್ಟಿನ ನೀರನ್ನು ಹೊರ ಹರಿಯಲು ಬಿಟ್ಟಿದ್ದು ಪ್ರಳಯ ಸಂಭವಿಸಲು ಕಾರಣವೇ? ಎಂಬುದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಅಣೆಕಟ್ಟಿನಲ್ಲಿ ಕೆಸರು ಸಂಗ್ರಹವಾಗಿದ್ದರಿಂದ ನೀರು ಬೇಗನೆ ತುಂಬಿದೆ.ಅದೇ ವೇಳೆ ರಾಷ್ಟ್ರೀಯ ಹವಾಮಾನ ನಿರೀಕ್ಷಣಾ ಕೇಂದ್ರದ ವರದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ.ಜೋರಾಗಿ ಸುರಿವ ಮಳೆಯ ಪರಿಣಾಮವನ್ನು ಎದುರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಳಯವನ್ನು ನಿಭಾಯಿಸುವ ಕಾರ್ಯದಲ್ಲಿ ಸರ್ಕಾರ ಸೋತಿದೆ ಎಂಬ ಆರೋಪ ಹೊರಿಸಿ ಸಾಕಷ್ಟು ಅರ್ಜಿಗಳುಹೈಕೋರ್ಟ್ನಲ್ಲಿವೆ. ಹೀಗಾಗಿ ನ್ಯಾಯಾಲಯವು ಅಮಿಕಸ್ ಕ್ಯೂರಿ ನೇಮಕ ಮಾಡಿತ್ತು.