ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ನಾಯಕರಾದ ಸಂಬಾಜಿ ಭಿಡೆ ಹಾಗೂ ಮಿಲಿಂದ್ ಏಕಬೋಟೆ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ವಂಚಿತ್ ಬಹುಜನ ಅಗಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಗುರುವಾರ ಆಗ್ರಹಿಸಿದ್ದಾರೆ.
‘ರಾಜಕೀಯ ಕಾರಣಕ್ಕಾಗಿ ಅವರನ್ನು ರಕ್ಷಿಸಲಾಗಿಯೇ? ಈ ಬಗ್ಗೆ ತನಿಖೆ ನಡೆಯಲಿ’ ಎಂದು ಅವರು ಒತ್ತಾಯಿಸಿದ್ದಾರೆ.
‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಶೀಘ್ರ ಭೇಟಿಯಾಗಲಿದ್ದೇನೆ’ ಎಂದೂ ತಿಳಿಸಿದ್ದಾರೆ.
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ಸಂಸ್ಥಾಪಕ ಸಂಬಾಜಿ ಭಿಡೆ ಮತ್ತು ಸಮಸ್ತ ಹಿಂದೂ ಅಗಾಡಿ ಸಂಸ್ಥಾಪಕ ಮಿಲಿಂದ್ ಏಕಬೋಟೆ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬಂಧನಕ್ಕೊಳಗಾಗಿದ್ದ ಏಕಬೋಟೆ ಜಾಮೀನಿನಲ್ಲಿ ಹೊರ ಬಂದಿದ್ದಾರೆ. ಪ್ರಕರಣದಲ್ಲಿ ಸಂಬಾಜಿ ಪಾತ್ರ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೇಳಿದ್ದರು.
ಪ್ರಕರಣದ ವಿಚಾರಣೆಯನ್ನು ವಿಶೇಷ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಈಚೆಗೆ ಉದ್ಧವ್ ಠಾಕ್ರೆ ಅವರನ್ನು ಒತ್ತಾಯಿಸಿದ್ದರು.