ಚಂಡಿಗಡ: ಲೋಕಸಭೆ ಚುನಾವಣೆಯ ಸೋಲು ಮತ್ತು ಪಕ್ಷದೊಳಗಿನ ಭಿನ್ನಮತದಿಂದ ನಲುಗಿರುವ ಕಾಂಗ್ರೆಸ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಂಜಾಬ್ನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ನವಜೋತ್ ಸಿಂಗ್ ಸಿಧು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಟ್ವಿಟರ್ನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.
ಜೂನ್ 10ರ ದಿನಾಂಕ ಇರುವ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲ್ಲಿಸಲಾಗಿದ್ದ ರಾಜೀನಾಮೆಯನ್ನು ಈಗ ಸಿಧು ಬಹಿರಂಗಪಡಿಸಿದ್ದಾರೆ.
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗೆ ಸಿಧು ತೀವ್ರ ಭಿನ್ನಮತ ಹೊಂದಿದ್ದಾರೆ. ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ವ್ಯವಹಾರಗಳ ಖಾತೆಯನ್ನು ಅವರು ಹೊಂದಿದ್ದರು. ಆದರೆ, ಭಿನ್ನಮತ ತೀವ್ರಗೊಂಡ ಬಳಿಕ ಈ ಖಾತೆಗಳನ್ನು ಅವರಿಂದ ಅಮರಿಂದರ್ ವಾಪಸ್ ಪಡೆದುಕೊಂಡಿದ್ದರು.