ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರ ‘ಬೇಟಿ ಬಚಾವೋ, ಬೇಟಿ ಪಢಾವೋ’ ಧ್ಯೇಯವಾಕ್ಯವನ್ನು ‘ಬೇಟಿ ಪಢಾವೋ, ಬಿಜೆಪಿ ನೇತಾವೋಂಸೆ, ಮಂತ್ರಿಯೋಂಸೆ, ಎಂಎಲ್ಎಸೆ ಬೇಟಿ ಬಚಾವೋ (ಮಗಳಿಗೆ ಶಿಕ್ಷಣ ನೀಡಿ, ಬಿಜೆಪಿ ನಾಯಕರಿಂದ, ಮಂತ್ರಿಗಳಿಂದ, ಶಾಸಕರಿಂದ ಮಗಳನ್ನು ರಕ್ಷಿಸಿ) ಎಂಬುದಾಗಿ ಬದಲಾಯಿಸಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುಹಕವಾಡಿದರು. ಬಿಜೆಪಿ ಸಚಿವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ಮಧ್ಯ ಪ್ರದೇಶದ ಶಿಯೊಪುರ್ ಜಿಲ್ಲೆಯಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ‘ಮೋದಿ ಅವರು ಒಳ್ಳೆಯ ಧ್ಯೆಯವಾಕ್ಯ ನೀಡಿದ್ದಾರೆ. ಅವರ ಸಂಪುಟದ ಸಚಿವರ ವಿರುದ್ಧ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರೊಬ್ಬರು ಅತ್ಯಾಚಾರ ಎಸಗಿದ್ದಾರೆ. ಆದರೆ ಪ್ರಧಾನಿ ಒಂದು ಶಬ್ದವನ್ನೂ ಮಾತನಾಡುತ್ತಿಲ್ಲ’ ಎಂದು ಹೇಳಿದರು.
ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ, ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇನ್ಗರ್ ಅವರನ್ನು ಉದ್ದೇಶಿಸಿ ರಾಹುಲ್ ಟೀಕೆ ಮಾಡಿದ್ದಾರೆ. ಪ್ರಧಾನಿ ಮಾತ್ರವಲ್ಲ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಮುಖ್ಯಮಂತ್ರಿಗಳೂ ಆರೋಪಗಳ ಬಗ್ಗೆ ತುಟಿಬಿಚ್ಚುತ್ತಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.