ನವದೆಹಲಿ: ಕೊರೊನಾ ವೈರಸ್ ಪಿಡುಗು ತಡೆಗೆ ನಿರ್ಬಂಧ ವಿಧಿಸಿರುವುದರಿಂದ ಬಡವರಿಗೆ ಆಗುವ ಅನಾನುಕೂಲ ಕಡಿಮೆ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್' ಯೋಜನೆಯನ್ನು ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.
'ಸರಿ ದಿಕ್ಕಿನತ್ತ ಸರ್ಕಾರ ಮೊದಲ ಹೆಜ್ಜೆಯಿಟ್ಟಿದೆ' ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.
'ಸರ್ಕಾರ ಇಂದು ಹಣಕಾಸು ಪ್ಯಾಕೇಜ್ ಘೋಷಿಸಿದೆ. ಇದು ಸರಿದಿಕ್ಕಿನತ್ತ ಇಟ್ಟ ಮೊದಲ ಹೆಜ್ಜೆ. ಭಾರತವು ತನ್ನ ರೈತರು, ದಿನಗೂಲಿಗಳು, ಕಾರ್ಮಿಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರ ನೆರವಿಗೆ ಧಾವಿಸಬೇಕಿದೆ. ಲಾಕ್ಡೌನ್ನಿಂದಾಗಿ ಈ ಸಮುದಾಯಗಳು ಹೆಚ್ಚಿನ ಬಿಸಿ ಅನುಭವಿಸುತ್ತಿವೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಟ್ವೀಟ್ಗೆ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿಗೆ ಪತ್ರ ಬರೆದು, 'ಈ ಸಂದಿಗ್ಧ ಸಮಯದಲ್ಲಿ ನಾವು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತೇವೆ' ಎಂದು ಘೋಷಿಸಿದ್ದರು.
ಬಡವರು, ವಲಸೆ ಕಾರ್ಮಿಕರು ಮತ್ತು ಸಹಾಯದ ಅಗತ್ಯದಲ್ಲಿರುವವರಿಗೆ ನೆರವಾಗಲೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಾಹ್ನ 1,75,000 ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಘೋಷಿಸಿದ್ದರು. ಸಚಿವರ ಈ ಕ್ರಮವನ್ನು ಕಾಂಗ್ರೆಸ್ ಸ್ವಾಗತಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.