ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಇಪಿ: ದೂರವಾಗದ ರೈತರ, ಕಾರ್ಮಿಕರ ಆತಂಕ

Last Updated 2 ನವೆಂಬರ್ 2019, 20:40 IST
ಅಕ್ಷರ ಗಾತ್ರ

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಭಾರತವು ಸಹಿ ಹಾಕಿದರೆ, ಭಾರತದ ತಯಾರಿಕಾ ವಲಯ, ರೈತರು ಮತ್ತು ಹಾಲು ಉತ್ಪಾದಕರಿಗೆ ಭಾರಿ ಹೊಡೆತ ಬೀಳಲಿದೆ ಎಂಬ ಆತಂಕ ಇದ್ದೇ ಇದೆ. ಒಪ್ಪಂದ ಅಂತಿಮಗೊಳ್ಳುವ ದಿನ ಹತ್ತಿರ ಬಂದರೂ, ಈ ಆತಂಕವನ್ನು ದೂರಮಾಡಲು ದೇಶದ ಯಾವ ನಾಯಕರೂ ಪ್ರಯತ್ನಿಸಿಲ್ಲ.ಇದರ ಮಧ್ಯೆಯೇ ಆರ್‌ಸಿಇಪಿಯನ್ನು ವಿರೋಧಿಸಿ ದೇಶದಾದ್ಯಂತ ಈಗಾಗಲೇ ರೈತರ ಮತ್ತು ಹಾಲು ಉತ್ಪಾದಕರ ಪ್ರತಿಭಟನೆಗಳು ನಡೆದಿವೆ. ಇದೇ ಸೋಮವಾರ (ನವೆಂಬರ್‌ 4) ದೇಶವ್ಯಾಪಿ ಪ್ರತಿಭಟನೆ ನಡೆಸಲು ಹಲವು ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಕರೆ ನೀಡಿವೆ.

ತಯಾರಿಕಾ ವಲಯಕ್ಕೆ ಆಪತ್ತು
ಈ ಒಪ್ಪಂದಕ್ಕೆ ಭಾರತವು ಸಹಿ ಹಾಕಿದರೆ, ಉಳಿದ 15 ರಾಷ್ಟ್ರಗಳೂ ಭಾರತದ ಜತೆ ಸುಂಕರಹಿತ ವ್ಯಾಪಾರ ನಡೆಸಬಹುದು. ಈ ರಾಷ್ಟ್ರಗಳಿಂದ ಭಾರತಕ್ಕೆ ಆಮದಾಗುವ ಸರಕು ಮತ್ತು ಹೊರಗುತ್ತಿಗೆ ಸೇವೆಗಳಿಗೆ ಭಾರತವು ಯಾವುದೇ ಸುಂಕ ವಿಧಿಸುವ ಹಾಗಿಲ್ಲ. ಆಮದು ವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಇದರಿಂದ ಸ್ಥಳೀಯ ಸರಕುಗಳಿಗೆ ಬೇಡಿಕೆ ಕುಸಿಯಲಿದೆ. ಭಾರತದ ತಯಾರಿಕಾ ವಲಯದ ಪ್ರಗತಿ ಕುಂಠಿತವಾಗಲಿದೆ.

ರೈತರು, ಡೈರಿ ಉದ್ಯಮಕ್ಕೆ ಹೊಡೆತ
ಆಸಿಯಾನ್ ರಾಷ್ಟ್ರಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಆಮದಾಗುವ ಸಾಧ್ಯತೆ ಇದೆ. ಭಾರತದಲ್ಲಿ ಇಂದು ಲಭ್ಯವಿರುವ ದರಕ್ಕಿಂತ ಕಡಿಮೆ ದರದಲ್ಲಿ, ಆಮದಾದ ಹಾಲು ಮತ್ತು ಹಾಲಿನ ಉತ್ಪನ್ನಗಳು ದೊರೆಯಲಿವೆ.ಇದರಿಂದ ದೇಶದ ಹೈನುಗಾರಿಕಾ ವಲಯಕ್ಕೆ ಭಾರಿ ಹೊಡೆತ ಬೀಳಲಿದೆ. ಹಸು ಸಾಕಿಕೊಂಡು, ಹಾಲು ಉತ್ಪಾದಿಸುತ್ತಿರುವ ರೈತರು ಮತ್ತು ಡೈರಿ ಉದ್ಯಮ ಕುಸಿಯಲಿದೆ.

ಚೀನಾಗೆ ಲಾಭ, ಭಾರತಕ್ಕೆ ನಷ್ಟ
ಬ್ಯಾಂಕಾಂಕ್‌ (ರಾಯಿಟರ್ಸ್‌/ಎಎಫ್‌ಪಿ): ಚೀನಾದ ವಸ್ತುಗಳ ಮೇಲೆ ಅಮೆರಿಕವು ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದರಿಂದ ಚೀನಾಗೆ ಭಾರಿ ಹೊಡೆತ ಬಿದ್ದಿದೆ. ಅಮೆರಿಕದಲ್ಲಿ ಕಳೆದುಕೊಳ್ಳುತ್ತಿರುವ ಮಾರುಕಟ್ಟೆಯನ್ನು ಭಾರತದಲ್ಲಿ ಕಂಡುಕೊಳ್ಳಲು ಚೀನಾ ಹರಸಾಹಸ ಪಡುತ್ತಿದೆ. ಹೀಗಾಗಿಯೇ ಆರ್‌ಸಿಇಪಿ ಒಪ್ಪಂದವನ್ನು ಅಂತಿಮಗೊಳಿಸಲು ಚೀನಾ ಒತ್ತಡ ಹೇರುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಚೀನಾವು ತನ್ನ ತಯಾರಿಕಾ ವಲಯಕ್ಕೆ ಹಲವು ವಿನಾಯಿತಿಗಳನ್ನು ನೀಡಿದೆ. ಹೀಗಾಗಿ ಅಲ್ಲಿ ತಯಾರಾಗುವ ವಸ್ತುಗಳ ಬೆಲೆ ಕಡಿಮೆ ಇರುತ್ತದೆ. ಭಾರತದಲ್ಲಿ ತಯಾರಾಗುವ ಸರಕುಗಳಿಗಿಂತ ಚೀನಾ ನಿರ್ಮಿತ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯಲಿವೆ. ಮುಕ್ತ ವ್ಯಾಪಾರ ಒಪ್ಪಂದದ ಅಡಿ ಸುಂಕರಹಿತ ವಹಿವಾಟು ನಡೆದರೆ, ಚೀನಾದ ಈ ವಸ್ತುಗಳ ಬೆಲೆ ಮತ್ತಷ್ಟು ಅಗ್ಗವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಅಗ್ಗದ ವಸ್ತುಗಳಿಗೆ ಬೇಡಿಕೆ ಏರುವ ಕಾರಣ ಭಾರತದಲ್ಲಿ ಚೀನಾದ ಮಾರುಕಟ್ಟೆ ವಿಸ್ತರಿಸಲಿದೆ. ಇದೇ ವೇಳೆ ಭಾರತದ ತಯಾರಿಕಾ ವಲಯದಲ್ಲಿ ಬೇಡಿಕೆ ಕುಸಿಯಲಿದೆ. ಪರಿಣಾಮವಾಗಿ ಭಾರತದ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಈ ಒಪ್ಪಂದವು ಆಮದು ವಸ್ತುಗಳ ಬಳಕೆಯನ್ನು ಉತ್ತೇಜಿಸುತ್ತದೆ ಎಂದು ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್‌ ಈ ಒಪ್ಪಂದವನ್ನು ವಿರೋಧಿಸುತ್ತಿದೆ. ಈ ಸಂಘಟನೆಯು ದೇಶದಾದ್ಯಂತ ಈಗಾಗಲೇ ಪ್ರತಿಭಟನೆ ನಡೆಸಿದೆ.

ಭಾರತದ ಸೇವಾ ವಲಯಕ್ಕೆ ಆರ್‌ಸಿಇಪಿ ರಾಷ್ಟ್ರಗಳಲ್ಲಿ ಮಾರುಕಟ್ಟೆ ಒದಗಿಸಿಕೊಡಲು ಭಾರತ ಸರ್ಕಾರವು ಆದ್ಯತೆ ನೀಡುತ್ತಿದೆ ಎಂದು ಮೂಲಗಳು ಹೇಳಿವೆ.

ಸುಂಕ ಬಿಡಲೇಬೇಕು...
* ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರೆ ಈ ರಾಷ್ಟ್ರಗಳಿಂದ ಆಮದಾಗುವ ವಸ್ತುಗಳ ಮೇಲೆ ಇರುವ ಸುಂಕವನ್ನು ರದ್ದು ಮಾಡಬೇಕಾಗುತ್ತದೆ.

* ಆಸಿಯಾನ್‌, ಜಪಾನ್‌ ಮತ್ತು ಆಸ್ಟ್ರೇಲಿಯಾದಿಂದ ಆಮದಾಗುವ ಶೇ 90ರಷ್ಟು ವಸ್ತುಗಳ ಮೇಲಿನ ಸುಂಕವನ್ನು ಭಾರತ ರದ್ದು ಮಾಡಬೇಕಾಗುತ್ತದೆ.

* ಚೀನಾದಿಂದ ಆಮದಾಗುವ ಶೇ 74ರಷ್ಟು ಸರಕುಗಳ ಮೇಲಿನ ಸುಂಕವನ್ನು ತೆಗೆದುಹಾಕಬೇಕಾಗುತ್ತದೆ.

* ಉಳಿದ ಸರಕುಗಳ ಮೇಲೆ ಇನ್ನೂ 20 ವರ್ಷ ಸುಂಕ ಜಾರಿಯಲ್ಲಿ ಇರಲಿದೆ ಎಂದು ಭಾರತವು ಪಟ್ಟು ಹಿಡಿದಿದೆ. ಆದರೆ ಈ ವಿನಾಯಿತಿಗೆ ಉಳಿದ ದೇಶಗಳು ಒಪ್ಪುತ್ತಿಲ್ಲ. ಹೀಗಾಗಿಯೇ 2013ರಿಂದಲೂ ಈ ಒಪ್ಪಂದ ಅಂತಿಮವಾಗದೆ ಉಳಿದಿದೆ.

* ಭಾನುವಾರದ ಶೃಂಗಸಭೆಯಲ್ಲಿ ಈ ಷರತ್ತುಗಳು ಅಂತಿಮಗೊಳ್ಳುವ ಸಾಧ್ಯತೆ ಇದೆ. ಆದರೆ ಯಾವೆಲ್ಲಾ ವಸ್ತುಗಳ ಮೇಲೆ ಸುಂಕ ಉಳಿಸಿಕೊಳ್ಳಲಾಗುತ್ತದೆ ಎಂಬುದನ್ನು ಭಾರತ ಸರ್ಕಾರವೂ ಬಹಿರಂಗಪಡಿಸಿಲ್ಲ.

ವ್ಯಾಪಾರ ಕೊರತೆ ಹಿಗ್ಗುವ ಆತಂಕ
ಆಸಿಯಾನ್‌ ರಾಷ್ಟ್ರಗಳು ಮತ್ತು ಭಾರತದ ನಡುವಣ ವ್ಯಾಪಾರ ಕೊರತೆ ಅಧಿಕ ಪ್ರಮಾಣದಲ್ಲಿದೆ. ಭಾರತವು ಆರ್‌ಸಿಇಪಿ ಸೇರಿದರೆ ವ್ಯಾಪಾರ ಕೊರತೆ ಮತ್ತಷ್ಟು ಹೆಚ್ಚಲಿದೆ ಎಂಬುದು ಆರ್‌ಸಿಇಪಿ ವಿರೋಧಿಸುತ್ತಿರುವವರ ಪ್ರಮುಖ ಆತಂಕ

* ಯಾವುದೇ ದೇಶವು ರಫ್ತು ಮಾಡುವ ಸರಕು/ಸೇವೆಗಳ ಮೊತ್ತಕ್ಕಿಂತ, ಆಮದು ಮಾಡಿಕೊಳ್ಳುವ ಸರಕು/ಸೇವೆಗಳ ಮೊತ್ತ ಅಧಿಕವಾಗಿದ್ದರೆ, ಅದನ್ನು ವ್ಯಾಪಾರ ಕೊರತೆ ಎನ್ನಲಾಗುತ್ತದೆ

* ರಫ್ತು ಮೊತ್ತ ಮತ್ತು ಆಮದು ಮೊತ್ತದ ನಡುವಣ ವ್ಯತ್ಯಾಸ ಮೊತ್ತವೇ ವ್ಯಾಪಾರ ಕೊರತೆ

* ಆರ್‌ಸಿಎಇಪಿ ಒಕ್ಕೂಟದಲ್ಲಿ ಬರಲಿರುವ ಎಲ್ಲಾ ದೇಶಗಳ ಜತೆ ಭಾರತವು ವ್ಯಾಪಾರ ಕೊರತೆ ಹೊಂದಿದೆ

* 2017–18ನೇ ಸಾಲಿನಲ್ಲಿ ಸಿಂಗಪುರದಿಂದ ಆಮದು ಮಾಡಿಕೊಂಡಿದ್ದ ಸರಕು/ಸೇವೆಗಳಿಗಿಂತ ಭಾರತವು ಹೆಚ್ಚಿನ ಮೊತ್ತದ ಸರಕು/ಸೇವೆಗಳನ್ನು ರಫ್ತು ಮಾಡಿತ್ತು. ಆದರೆ 2018–19ನೇ ಸಾಲಿನಲ್ಲಿ ಸಿಂಗಪುರದ ಜತೆ ಭಾರತದ ವ್ಯಾಪಾರ ಕೊರತೆ ₹ 37,100 ಕೋಟಿಯಷ್ಟಾಗಿತ್ತು

* ಆರ್‌ಸಿಇಪಿ ರಾಷ್ಟ್ರಗಳಿಂದ ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಸರಕು ಆಮದಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ಭಾರತದ ಆಮದು ಮತ್ತು ರಫ್ತಿನ ನಡುವಣ ಅಂತರ ಮತ್ತಷ್ಟು ಹೆಚ್ಚಾಗಲಿದೆ. ವ್ಯಾಪಾರ ಕೊರತೆ ಮತ್ತಷ್ಟು ಹಿಗ್ಗುವ ಅಪಾಯವಿದೆ

ಆಧಾರ: ಪಿಟಿಐ, ರಾಯಿಟರ್ಸ್‌, ಎಎಫ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT