ಮುಂಬೈ: ಇಲ್ಲಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ರಾಜ್ಯದ ಅತೃಪ್ತ ಶಾಸಕರು ಭದ್ರತೆ ಒದಗಿಸಬೇಕೆಂದು ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಹೀಗಾಗಿ ಅವರು ತಂಗಿರುವ ಹೋಟೆಲ್ ಎದುರುಮಹಾರಾಷ್ಟ್ರ ಮೀಸಲು ಪೊಲೀಸ್ ಪಡೆ ಹಾಗೂ ಗಲಭೆ ನಿಯಂತ್ರಣ ತಂಡವನ್ನುನಿಯೋಜಿಸಲಾಗಿದೆ.
ಅತೃಪ್ತ ಶಾಸಕರ ಮನವೊಲಿಸುವುದಕ್ಕಾಗಿ ಬುಧವಾರ ಬೆಳಿಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ತಂಡ ಮುಂಬೈಗೆ ಧಾವಿಸುತ್ತಾರೆಂದು ತಿಳಿದ ಶಾಸಕರು, ಅವರಿಂದ ತಪ್ಪಿಸಿಕೊಳ್ಳಲುಪೊಲೀಸರ ನೆರವು ಪಡೆದಿದ್ದಾರೆ.
ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರದ ಶಾಸಕರುಮುಂಬೈ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದು, ‘ಕರ್ನಾಟಕದಿಂದ ಬರುತ್ತಿರುವ ಕಾಂಗ್ರೆಸ್ಮುಖಂಡರನ್ನು ಭೇಟಿ ಮಾಡಲು ನಮಗೆ ಇಷ್ಟವಿಲ್ಲ. ಹೀಗಾಗಿ ನಮಗೆ ಭದ್ರತೆ ಒದಗಿಸಿ’ ಎಂದು ಮನವಿ ಮಾಡಿದ್ದಾರೆ.
‘ಕುಮಾರಸ್ವಾಮಿ ಮತ್ತು ಶಿವಕುಮಾರ್ ಅವರು ಹೋಟೆಲ್ಗೆ ಧಾವಿಸುತ್ತಾರೆ ಎಂಬ ಮಾಹಿತಿ ಬಂದಿದೆ. ಅವರು ಬೆದರಿಕೆ ಹಾಕುತ್ತಾರೆ ಎನ್ನುವ ಭಯ ನಮ್ಮಲ್ಲಿದೆ. ಹಾಗಾಗಿ ನಾವ್ಯಾರೂ ಅವರನ್ನು ಭೇಟಿಯಾಗಲು ಇಷ್ಟಪಡುವುದಿಲ್ಲ. ದಯವಿಟ್ಟು ಈ ವಿಷಯದಲ್ಲಿ ನಮಗೆ ಸಹಾಯ ಮಾಡಿ, ಅವರು ಹೋಟೆಲ್ ಆವರಣ ಪ್ರವೇಶಿಸದಂತೆ ನೋಡಿಕೊಳ್ಳಬೇಕು’ ಎಂದು ಪತ್ರದಲ್ಲಿ ಬರೆದಿದ್ದಾರೆ.
ಶಿವರಾಮ್ ಹೆಬ್ಬಾರ್, ಪ್ರತಾಪ್ ಗೌಡ ಪಾಟೀಲ, ಬಿ.ಸಿ.ಪಾಟೀಲ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಎಚ್.ವಿಶ್ವನಾಥ್, ನಾರಾಯಣ ಗೌಡ ಮತ್ತು ಮಹೇಶ್ ಕುಮಟಹಳ್ಳಿ ಅವರ ಸಹಿ ಪತ್ರದಲ್ಲಿದೆ.
ಶಾಸಕರು ಪತ್ರದಲ್ಲಿ ಬರೆದಿರುವ ಹಾಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಂಬೈಗೆ ತೆರಳುತ್ತಿಲ್ಲ. ಬದಲಿಗೆ ಶಾಸಕ ಶಿವಲಿಂಗೇ ಗೌಡ ಹಾಗೂ ಡಿ.ಕೆ.ಶಿವಕುಮಾರ್ ಬೆಳಿಗ್ಗೆ 10ಕ್ಕೆ ಮುಂಬೈಗೆ ಬಂದಿಳಿದಿದ್ದಾರೆ.
Karnataka Minister DK Shivakumar, in #Mumbai: Let Mumbai Police or any other force be deployed. Let them do their duty. We've come to meet our friends. We were born together in politics, we will die together in politics. They are our party men. We have come to meet them. pic.twitter.com/F7fCh7i6kh
— ANI (@ANI) July 10, 2019
‘ಮುಂಬೈ ಪೊಲೀಸ್ ಅಥವಾ ಯಾವುದೇ ಪಡೆಯನ್ನು ನಿಯೋಜಿಸಲಿ. ಅವರ ಕೆಲಸಕ್ಕೆ ನಾವು ಅಡ್ಡಿ ಮಾಡುವುದಿಲ್ಲ. ನಾವು ನಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದೇವೆ. ರಾಜಕೀಯದಲ್ಲಿ ನಾವು ಒಟ್ಟಿಗೆ ಬೆಳೆದಿದ್ದೇವೆ, ಒಟ್ಟಿಗೆ ಸಾಯುತ್ತೇವೆ. ಅವರು ನಮ್ಮ ಪಕ್ಷದ ಸದಸ್ಯರು. ಅವರನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದೇವೆ’ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
'ನಮ್ಮ ಶಾಸಕರನ್ನು ಬಿಜೆಪಿ ನಾಯಕರು ಬಂಧನದಲ್ಲಿಟ್ಟಿದ್ದಾರೆ. ಈ ಬಗ್ಗೆ ಶಾಸಕರು ನಮಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಲು ಬಂದಿದ್ದೇವೆ. ಅವರ ಜತೆ ಮಾತನಾಡುತ್ತೇವೆ. ವಾಪಾಸು ಬರುವುದು ಬಿಡುವುದು ಅವರಿಗೆಬಿಟ್ಟ ವಿಷಯ' ಎಂದುಶಾಸಕ ಶಿವಲಿಂಗೇಗೌಡ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.