ತಿರುವನಂತಪುರಂ: ಕೇರಳಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದಿದ್ದ ಸರ್ವ ಪಕ್ಷಗಳ ಸಭೆಯು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್(ಯುಡಿಎಫ್) ಹಾಗೂ ಬಿಜೆಪಿ ಹೊರನಡೆಯುವುದರೊಂದಿಗೆ ಅಂತ್ಯವಾಯಿತು.
ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸಂಬಂಧ ಸುಪ್ರೀಕೋರ್ಟ್ ನೀಡಿದ ತೀರ್ಪಿನಿಂದಾಗಿ ರಾಜ್ಯದಲ್ಲಿ ತಲೆದೋರಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈ ಸಭೆ ಕರೆಯಲಾಗಿತ್ತು.
ಸಭೆಯಿಂದ ಹೊರಬಂದ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ, ‘ಎರಡು ಗಂಟೆಗೂ ಹೆಚ್ಚು ಸಮಯವನ್ನು ನಾವು ಹಾಳು ಮಾಡಿಕೊಂಡೆವು. ಸರ್ಕಾರವು ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತಿಲ್ಲ’ ಎಂದು ಆರೋಪಿಸಿದರು.
‘ಮೊಂಡುತನದಿಂದಾಗಿ ಮಾತುಕತೆ ವಿಫಲವಾಯಿತು. ಸಮಸ್ಯೆ ಪರಿಹರಿಸಲು ಇದ್ದ ಸುವರ್ಣಾವಕಾಶವನ್ನು ಸರ್ಕಾರ ಕಳೆದುಕೊಂಡಿತು’ ಎಂದು ಕಾಂಗ್ರೆಸ್ ನಾಯಕ ರಮೇಶ್ ಚಿನ್ನಿತಲಾ ಹರಿಹಾಯ್ದರು.
ಎರಡು ತಿಂಗಳ ಅವಧಿಯ ವಾರ್ಷಿಕ ಯಾತ್ರಾ ಋತು ‘ಮಂಡಲ ಮಕರವಿಲಕ್ಕು’ ನವೆಂಬರ್ 17ರಿಂದ ಆರಂಭವಾಗಲಿದ್ದು ಶುಕ್ರವಾರವೇ(ನ.16) ದೇವಾಲಯದ ಬಾಗಿಲು ತೆರಲಾಗುತ್ತದೆ.