ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ, ಬಿಜ್ವಾಸನ್ ಕ್ಷೇತ್ರದ ದೇವಿಂದರ್ ಸಿಂಗ್ ಸೆಹ್ರಾವತ್ ಸೋಮವಾರ ಬಿಜೆಪಿಗೆ ಸೇರಿದ್ದಾರೆ. ಕಳೆದ ಶುಕ್ರವಾರ ಎಎಪಿಯ ಗಾಂಧಿನಗರ ಕ್ಷೇತ್ರದ ಶಾಸಕ ಅನಿಲ್ ಭಾಜಪೇಯಿ ಬಿಜೆಪಿ ಸೇರಿದ್ದರು.
‘ನರೇಂದ್ರ ಮೋದಿ ಸರ್ಕಾರ ‘ರಫೇಲ್ ಹಗರಣದ ಗಳಿಕೆ’ಯನ್ನು ಶಾಸಕರ ಖರೀದಿಗೆ ಬಳಸುತ್ತಿದೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ ಮೂರು ದಿನಗಳ ಅಂತರದಲ್ಲಿಯೇ ಈ ಬೆಳವಣಿಗೆ ನಡೆದಿದೆ.
ದೆಹಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ವಿಜಯ್ ಗೋಯಲ್ ಉಪಸ್ಥಿತಿಯಲ್ಲಿ ಸೆಹ್ರಾವತ್ ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿಯು ತನ್ನ ಏಳು ಶಾಸಕರಿಗೆ ತಲಾ ₹ 10 ಕೋಟಿ ಆಮಿಷವೊಡ್ಡಿದೆ ಎಂದು ಎಎಪಿ ಆರೋಪಿಸಿತ್ತು. ಆದರೆ, ಇದನ್ನು ಬಿಜೆಪಿ ನಿರಾಕರಿಸಿತ್ತು.
ನನ್ನನ್ನು ಪಕ್ಷದ ಕಾರ್ಯಗಳಿಗೆ ಆಮಂತ್ರಿಸುತ್ತಿರಲಿಲ್ಲ. ಪಕ್ಷ ನನ್ನನ್ನು ಅವಮಾನಿಸಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಸೆಹ್ರಾವತ್ ಪ್ರತಿಕ್ರಿಯಿಸಿದರು.