ನವದೆಹಲಿ: ರಾಜಕಾರಣಿಗಳಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಪ್ರತ್ಯೇಕ ನ್ಯಾಯಮಂಡಳಿ ಸ್ಥಾಪಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
ಬುಧವಾರ ದಕ್ಷಿಣ ಭಾರತದ ಪತ್ರಕರ್ತರಿಗೆ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
ರಾಜಕೀಯ ಲಾಭಕ್ಕಾಗಿ ಹಾಗೂ ಸಚಿವರಾಗುವ ಉದ್ದೇಶದೊಂದಿಗೆ ಪಕ್ಷ ಬದಲಿಸುವವರ ಸಂಖ್ಯೆ ಹೆಚ್ಚುತ್ತಿದೆ. 10 ವರ್ಷ ಗತಿಸಿದರೂ ಪಕ್ಷಾಂತರಕ್ಕೆ ಸಂಬಂಧಿಸಿದ ಪ್ರಕರಣಗಳು ಇತ್ಯರ್ಥವಾಗದಿರುವ ಉದಾಹರಣೆಗಳು ಇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷಾಂತರ ಹಾಗೂ ರಾಜಕೀಯ ಮುಖಂಡರ ವಿರುದ್ಧದ ಅಪರಾಧ ಪ್ರಕರಣಗಳನ್ನು ಮೂರು ತಿಂಗಳೊಳಗೆ ಇತ್ಯರ್ಥಪಡಿಸುವ ಪದ್ಧತಿ ಜಾರಿಯಾಗಬೇಕು ಎಂದು ಅವರು ತಿಳಿಸಿದರು.
ಪಕ್ಷಾಂತರ ತಡೆಗಾಗಿ ಪ್ರತ್ಯೇಕ ಕಾಯ್ದೆಯೇ ಇದೆ. ರಾಜೀನಾಮೆ ನೀಡದೆಯೇ ಬೇರೆ ಪಕ್ಷ ಸೇರಿ ಸಚಿವರಾಗಲು ಬಯಸುವವವರಿಗೆ ಮತದಾರರೇ ಸೂಕ್ತ ಉತ್ತರ ನೀಡಬೇಕು. ಕರ್ನಾಟಕದಲ್ಲಿ ಇತ್ತೀಚೆಗೆ ಪಕ್ಷಾಂತರ ಮಾಡಿದವರು ಪುನರಾಯ್ಕೆಯಾಗಿದ್ದಾರೆ ಎಂದು ಒತ್ತಿ ಹೇಳಿದರು.