ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಹ್ರಾಬ್‌ ಎನ್‌ಕೌಂಟರ್‌: ಯಾರೂ ಅಪರಾಧಿಗಳಲ್ಲ

ರಾಜಕೀಯ ಮಹತ್ವದ 13 ವರ್ಷಗಳ ಹಿಂದಿನ ಪ್ರಕರಣದ ಆರೋಪಿಗಳ ಖುಲಾಸೆ
Last Updated 21 ಡಿಸೆಂಬರ್ 2018, 20:30 IST
ಅಕ್ಷರ ಗಾತ್ರ

ಮುಂಬೈ: ದೇಶದ ಗಮನ ಸೆಳೆದಿದ್ದ ಸೊಹ್ರಾಬುದ್ದೀನ್‌ ಶೇಕ್‌ ಮತ್ತು ತುಳಸಿರಾಮ್‌ ಪ್ರಜಾಪತಿ ನಕಲಿ ಎನ್‌ಕೌಂಟರ್‌ ಹಾಗೂ ಸೊಹ್ರಾಬುದ್ದೀನ್‌ ಪತ್ನಿ ಕೌಸರ್‌ ಬಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದ ಎಲ್ಲ 22 ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.

ಸಾಕ್ಷ್ಯಾಧಾರಗಳ ಕೊರತೆಯಿಂದ 13 ವರ್ಷಗಳ ಹಿಂದಿನ ಎನ್‌ಕೌಂಟರ್‌ ಪ್ರಕರಣದ ಎಲ್ಲ ಆರೋಪಿಗಳನ್ನೂ ಬಿಡುಗಡೆ ಮಾಡುತ್ತಿರುವುದಾಗಿ ಸಿಬಿಐ ವಿಶೇಷ ನ್ಯಾಯಾಧೀಶ ಎಸ್‌.ಜೆ. ಶರ್ಮಾ ಹೇಳಿದ್ದಾರೆ.

‘ಆರೋಪಗಳನ್ನು ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ನೀಡಲಾದ ಪುರಾವೆಗಳು ಸಮಾಧಾನಕರವಾಗಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರಕರಣದ ತನಿಖೆ ನಡೆಸಿದ ಸಿಬಿಐ ಅತ್ಯಂತ ಉತ್ತಮ ಕೆಲಸ ಮಾಡಿದೆ. ಸಾಕ್ಷಿಗಳು ತಿರುಗಿಬಿದ್ದ ಕಾರಣ ಆರೋಪ ಸಾಬೀತುಪಡಿಸಲು ಪ್ಯಾಸಿಕ್ಯೂಷನ್‌ ವಿಫಲವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸೊಹ್ರಾಬುದ್ದೀನ್‌ ಕುಟುಂಬದ ಸದಸ್ಯರು, ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

‘ನಮಗೆ ನ್ಯಾಯಾಲಯ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ, ವಿಶ್ವಾಸವಿದೆ. ಕಾನೂನು ಹೋರಾಟ ಮುಂದುವರಿಸುತ್ತೇವೆ’ ಎಂದು ಸೊಹ್ರಾಬುದ್ದೀನ್‌ ಸಹೋದರ ರುಬಾಬುದ್ದೀನ್‌ ಶೇಕ್‌ ಪ್ರತಿಕ್ರಿಯಿಸಿದ್ದಾರೆ.

ತುಳಸಿರಾಮ್‌ ಪ್ರಜಾಪತಿ ಕುಟುಂಬದ ಸದಸ್ಯರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ತೀರ್ಪಿನ ಪ್ರತಿ ಇನ್ನೂ ಕೈಸೇರಿಲ್ಲ. ಅದನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಸಿಬಿಐ ಪರ ವಾದ ಮಂಡಿಸಿದ ಸರ್ಕಾರಿ ವಕೀಲ ಬಿ.ಪಿ. ರಾಜು ತಿಳಿಸಿದ್ದಾರೆ.

13 ವರ್ಷಗಳ ಹಿಂದಿನ ಪ್ರಕರಣ:ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು 2005ರ ನವೆಂಬರ್‌ 26ರಂದು ಸೊಹ್ರಾಬುದ್ದೀನ್‌ನನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದರು.

ಅದಾದ ವರ್ಷದ ಬಳಿಕ ತುಳಸಿರಾಮ್‌ ಪ್ರಜಾಪತಿಯನ್ನೂ ಎನ್‌ಕೌಂಟರ್‌ ಮಾಡಲಾಗಿತ್ತು. ಇದಕ್ಕೆ ಸಾಕ್ಷಿಯಾಗಿದ್ದ ಸೊಹ್ರಾಬುದ್ದೀನ್‌ ಪತ್ನಿ ಕೌಸರ್‌ ಬಿ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿತ್ತು.

ಪಾಂಡ್ಯಾ ಹತ್ಯೆಯಲ್ಲಿ ಕೈವಾಡ:2003ರಲ್ಲಿ ನಡೆದ ಗುಜರಾತ್‌ನ ಗೃಹ ಖಾತೆ ರಾಜ್ಯ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಹರೆನ್‌ ಪಾಂಡ್ಯಾ ಹತ್ಯೆಯಲ್ಲಿ ಇಬ್ಬರ ಕೈವಾಡವಿದೆ ಎಂದು ಪ್ರಮುಖ ಸಾಕ್ಷಿಯಾಗಿದ್ದ ಅಜಂ ಖಾನ್‌, ಪೊಲೀಸರ ತನಿಖೆ ವೇಳೆ ಬಾಯ್ಬಿಟ್ಟಿದ್ದ.

ಪೊಲೀಸರು ನಡೆಸಿದ ಎನ್‌ಕೌಂಟರ್‌ ನಕಲಿ ಎಂದು ಸಂದೇಹ ವ್ಯಕ್ತಪಡಿಸಿ ಸೊಹ್ರಾಬುದ್ದೀನ್ ಸಹೋದರ ರುಬಾಬುದ್ದೀನ್‌ ಶೇಕ್‌ 2006ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು. ಈ ಕುರಿತು ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದರು.

ಸಿಐಡಿ ತನಿಖೆ:ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 2007ರಲ್ಲಿ ಪ್ರಕರಣದ ತನಿಖೆ ನಡೆಸಿದ ಗುಜರಾತ್ ಸಿಐಡಿ, ಎರಡೂ ಎನ್‌ಕೌಂಟರ್‌ ನಕಲಿ ಎಂದು ಹೇಳಿತ್ತು.

ಕೌಸರ್‌ ಬಿಯನ್ನು ಹತ್ಯೆ ಮಾಡಿ ಶವವನ್ನು ಗುಜರಾತ್‌ನ ಇಲ್ಲೋಳ್‌ ಎಂಬಲ್ಲಿ ಹೂಳಲಾಗಿದೆ ಎಂದು ವರದಿ ನೀಡಿತ್ತು.

ಹೆಚ್ಚಿನ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು 2010ರಲ್ಲಿ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆಯನ್ನು ಮುಂಬೈಗೆ ವರ್ಗಾಯಿಸಲಾಗಿತ್ತು.

ಆರೋಪಿಗಳ ಪಟ್ಟಿಯಲ್ಲಿದ್ದಅಮಿತ್‌ ಶಾ, ವಂಜಾರ

ಸೊಹ್ರಾಬುದ್ದೀನ್‌ ಮತ್ತು ಪ್ರಜಾಪತಿ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಒಟ್ಟು 38 ಜನರ ವಿರುದ್ಧ ಆರೋಪ ಹೊರಿಸಲಾಗಿತ್ತು.

ಗುಜರಾತ್‌ ಗೃಹ ಸಚಿವರಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜಸ್ಥಾನದ ಅಂದಿನ ಗೃಹ ಸಚಿವ ಗುಲಾಬ್‌ ಚಂದ್‌ ಕಟಾರಿಯಾ ಸೇರಿದಂತೆ ಗುಜರಾತ್‌, ರಾಜಸ್ಥಾನ ಮತ್ತು ಆಂಧ್ರ ಪ್ರದೇಶದ ಐಪಿಎಸ್‌ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಆರೋಪಿಗಳಾಗಿದ್ದರು.

ಅಮಿತ್‌ ಶಾ, ಗುಲಾಬ್‌ ಚಂದ್‌ ಕಟಾರಿಯಾ ಸೇರಿದಂತೆ 16 ಆರೋಪಿಗಳು 2014ರಿಂದ 2017ರ ಅವಧಿಯಲ್ಲಿ ಖುಲಾಸೆಯಾಗಿದ್ದರು.

‘ಎನ್‌ಕೌಂಟರ್‌ ಸ್ಪೆಷಲಿಸ್ಟ್‌’ ಎಂದು ಖ್ಯಾತರಾಗಿದ್ದ ಅಂದಿನ ಡಿಐಜಿ ಮತ್ತು ಎಟಿಎಸ್‌ ಮುಖ್ಯಸ್ಥ ಡಿ.ಜಿ. ವಂಜಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾಗಿದ್ದ ದಿನೇಶ್‌ ಎಂ.ಎನ್‌. ಮತ್ತು ರಾಜಕುಮಾರ್‌ ಪಾಂಡಿಯನ್‌ ಈಗಾಗಲೇ ಖುಲಾಸೆಯಾಗಿದ್ದಾರೆ.

‘ಎನ್‌ಕೌಂಟರ್‌ ನಡೆದದ್ದು ನಿಜ. ಅದರಲ್ಲಿ ಯಾವುದೇ ಸಂಶಯ ಬೇಡ. ಆದರೆ, ನಾವೆಲ್ಲ ದೆಹಲಿ ಮತ್ತು ಗುಜರಾತ್‌ ರಾಜಕೀಯಕ್ಕೆ ಬಲಿಪಶುಗಳಾಗಿದ್ದೆವು’ ಎಂದು ಪ್ರಕರಣದ ಮೊದಲ ಆರೋಪಿಯಾಗಿದ್ದ ವಂಜಾರ ಪ್ರತಿಕ್ರಿಯಿಸಿದ್ದಾರೆ.

ತಿರುಗಿಬಿದ್ದ ಸಾಕ್ಷಿಗಳು: ಬಿದ್ದ ಪ್ರಕರಣ

ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಒಟ್ಟು 700 ಸಾಕ್ಷಿಗಳನ್ನು ಪಟ್ಟಿ ಮಾಡಿತ್ತು.

2017ರ ನವೆಂಬರ್‌ನಲ್ಲಿ ನಕಲಿ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಸಿಬಿಐ ವಿಶೇಷ ನ್ಯಾಯಾಲಯವು 210 ಸಾಕ್ಷಿಗಳ ವಿಚಾರಣೆ ನಡೆಸಿತ್ತು.

ಆ ಪೈಕಿ ಹೇಳಿಕೆ ಬದಲಿಸಿದ್ದ 92 ಜನರು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು. ಪ್ರಮುಖ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ್ದು ಆರೋಪಿಗಳ ಖುಲಾಸೆಗೆ ಕಾರಣ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.

ಮೋದಿ ಹತ್ಯೆಗೆ ಸಂಚು: ಎಟಿಎಸ್‌ ವಾದ

ಸೊಹ್ರಾಬುದ್ದೀನ್‌ ಶೇಕ್‌ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಮತ್ತು ಲಷ್ಕರ್‌–ಎ– ತಯಬಾ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದ ಎಂದು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಆರೋಪಿಸಿತ್ತು.

ಅಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸೊಹ್ರಾಬುದ್ದೀನ್‌ ಸಂಚು ರೂಪಿಸಿದ್ದ ಎಂದು ಹೇಳಿತ್ತು.

**

ನ್ಯಾಯಾಲಯದಲ್ಲಿಯೇ ಕಣ್ಣೀರು

ಕಿಕ್ಕಿರಿದು ತುಂಬಿದ್ದ ಕೋರ್ಟ್ ಹಾಲ್‌ನಲ್ಲಿ ತೀರ್ಪು ಹೊರ ಬೀಳುತ್ತಿದ್ದಂತೆಯೇ ಖುಲಾಸೆಗೊಂಡ ಆರೋಪಿಗಳು ಸಂತಸದಿಂದ ಕಣ್ಣೀರು ಹಾಕಿದರು. ವಕೀಲರಿಗೆ ಕೃತಜ್ಞತೆ ಸಲ್ಲಿಸಿದರು.

‘ನಾವು ಅಮಾಯಕರು. ಪ್ರಕರಣದಿಂದ ನಿರಾಪರಾಧಿಗಳಾಗಿ ಹೊರಬರುವ ವಿಶ್ವಾಸವಿತ್ತು’ ಎಂದು ಹಿರಿಯ ಇನ್‌ಸ್ಪೆಕ್ಟರ್‌ ಅಬ್ದುಲ್‌ ರೆಹಮಾನ್‌ ಹೇಳಿದರು.

‘ನಾನೀಗ ನಿರಾಳನಾಗಿದ್ದೇನೆ’ ಎಂದು ಇನ್‌ಸ್ಪೆಕ್ಟರ್‌ ನಾರಾಯಣ ಸಿಂಗ್‌ ಧಾಬಿ ಪ್ರತಿಕ್ರಿಯಿಸಿದರು.

ಸೊಹ್ರಾಬುದ್ದೀನ್‌ ಶೇಕ್‌ನನ್ನು ಅಪಹರಿಸಿದ ಮತ್ತು ಗುಂಡು ಹೊಡೆದ ಆರೋಪ ಇವರ ಮೇಲಿತ್ತು.

ತುಳಸಿರಾಮ್‌ ಪ್ರಜಾಪತಿಗೆ ಗುಂಡಿಕ್ಕಿದ ಆರೋಪ ಎದುರಿಸುತ್ತಿದ್ದ ಇನ್‌ಸ್ಪೆಕ್ಟರ್‌ ಆಶಿಶ್‌ ಪಾಂಡ್ಯಾ ‘ನನಗೆ ನ್ಯಾಯಾಂಗ ವ್ಯವಸ್ಥೆ, ಕಾನೂನಿನಲ್ಲಿ ನಂಬಿಕೆ ಇತ್ತು’ ಎಂದು ಹೇಳಿದ್ದಾರೆ. ಎನ್‌ಕೌಂಟರ್‌ನಲ್ಲಿ ಪಾಂಡ್ಯಾ ಅವರಿಗೂ ಗುಂಡು ತಗುಲಿತ್ತು.

ನ್ಯಾಯಾಲಯಕ್ಕೆ ಸಿಬಿಐ ಸೂಕ್ತ ಸಾಕ್ಷ್ಯಾಧಾರ ಒದಗಿಸಲಿಲ್ಲ ಎಂದು ಆರೋಪಿಗಳ ಪರ ವಕೀಲ ಸಚಿನ್‌ ಪವಾರ್‌ ಅಭಿಪ್ರಾಯಪಟ್ಟಿದ್ದಾರೆ.

**

ಮೂರು ಜೀವಗಳು ಬಲಿಯಾಗಿರುವುದು ನಿಜ. ನಮ್ಮ ನ್ಯಾಯಾಂಗ ವ್ಯವಸ್ಥೆ ಮತ್ತು ಕಾನೂನಿಗೆ ಬೇಕಿರುವುದು ಸಾಕ್ಷಿಗಳು. ಸೊಹ್ರಾಬುದ್ದೀನ್‌ ಮತ್ತು ತುಳಸಿರಾಮ್‌ ಕುಟುಂಬಕ್ಕೆ ನಾನು ಸಾಂತ್ವನ ಹೇಳುತ್ತೇನೆ.

-ಎಸ್‌.ಜೆ. ಶರ್ಮಾ, ಸಿಬಿಐ ವಿಶೇಷ ನ್ಯಾಯಾಧೀಶ

**
ಸೊಹ್ರಾಬುದ್ದೀನ್‌ ಮತ್ತು ತುಳಸಿರಾಮ್‌ನನ್ನು ಎನ್‌ಕೌಂಟರ್‌ ಮಾಡದಿದ್ದರೆ ಅವರು ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುತ್ತಿದ್ದರು. ನಾವು ಮೋದಿ ಅವರ ಜೀವ ಉಳಿಸಿದ್ದೇವೆ
– ಡಿ.ಜಿ. ವಂಜಾರ,ಗುಜರಾತ್‌ ಎಟಿಎಸ್‌ ಮಾಜಿ ಡಿಐಜಿ

**

ತನಿಖಾ ಸಂಸ್ಥೆ ಮತ್ತು ವ್ಯವಸ್ಥೆ ಭ್ರಷ್ಟಾಚಾರದಿಂದ ತುಂಬಿದೆ. ಸಿಬಿಐ ಈ ಪ್ರಕರಣವನ್ನು ಸರಿಯಾಗಿ ನಿರ್ವಹಿಸಲಿಲ್ಲ
-ರುಬಾಬುದ್ದೀನ್‌ ಶೇಕ್‌,ಸೊಹ್ರಾಬುದ್ದೀನ್‌ ಸಹೋದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT