ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆ ಗುಣಮಟ್ಟದಲ್ಲಿ ಲೋಪ–ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಮೇಯರ್ ಎಂ. ಗೌತಮ್ ಕುಮಾರ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಸೇತುವೆಯ ಬೇರಿಂಗ್ನಲ್ಲಿ ದೋಷ, ಮೇಲ್ಸೇತುವೆ ಮಧ್ಯಭಾಗದಲ್ಲಿ ಸಮರ್ಪಕವಾಗಿ ಸ್ಲ್ಯಾಬ್ ಅಳವಡಿಸದಿರುವುದು, ಸಿಮೆಂಟ್ ಮಿಶ್ರಣದಲ್ಲಿ ಲೋಪವಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ಸೇತುವೆಯನ್ನು ಪರಿಶೀಲಿಸಿದ ಮೇಯರ್, ‘ಸುರಕ್ಷತೆ ದೃಷ್ಟಿಯಿಂದ ಸೇತುವೆಯನ್ನು ದುರಸ್ತಿಪಡಿಸಲಾಗುವುದು. ಡಿ.15ರಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಸಿವಿಲ್ ಎಡ್ ಟೆಕ್ನೋಕ್ಲಿನಿಕ್ ಸಂಸ್ಥೆಯ ತಾಂತ್ರಿಕ ತಜ್ಞರ ತಂಡವು ಮೇಲ್ಸೇತುವೆಯ ಬೇರಿಂಗ್ಗಳು, ಕಾಂಕ್ರೀಟ್ ಮಿಶ್ರಣ ಸೇರಿದಂತೆ ಇನ್ನಿತರ ದುರಸ್ತಿಗಾಗಿ ₹40 ಲಕ್ಷ ವೆಚ್ಚವಾಗಲಿದೆ ಎಂದು ಹೇಳಿದೆ’ ಎಂದು ಅವರು ತಿಳಿಸಿದರು.
‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2010ರಲ್ಲಿ ಈ ಮೇಲ್ಸೇತುವೆಯನ್ನು ನಿರ್ಮಿಸಿತ್ತು. 2016ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಿದೆ. ಈಗ ಇದರ ನಿರ್ವಹಣೆ ಹೊಣೆ ಬಿಬಿಎಂಪಿಯದ್ದು. ಹಾಗಾಗಿ ಪಾಲಿಕೆಯೇ ಈ ವೆಚ್ಚವನ್ನು ಭರಿಸಲಿದೆ’ ಎಂದರು.
‘ಮೇಲ್ಸೇತುವೆ ಸುರಕ್ಷಿತವಾಗಿದ್ದು, ಆತಂಕ ಪಡುವ ಅಗತ್ಯ ಇಲ್ಲ. ಸುರಕ್ಷತೆಯ ದೃಷ್ಟಿಯಿಂದ ದುರಸ್ತಿ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ, ಶೀಘ್ರವೇ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವುಮಾಡಿಕೊಡಲಾಗುವುದು’ ಎಂದು ತಿಳಿಸಿದರು.