ನವದೆಹಲಿ: ಲಾಕ್ಡೌನ್ ಸಂದರ್ಭದಲ್ಲಿ ಮನೆ ಬಾಗಲಿಗೇ ಮದ್ಯ ವಿತರಿಸುವ ಬಗ್ಗೆ ರಾಜ್ಯ ಸರ್ಕಾರಗಳು ಚಿಂತನೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
‘ನಾವು ಆದೇಶ ನೀಡುತ್ತಿಲ್ಲ. ಆದರೆ, ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸುವ ನಿಟ್ಟಿನಲ್ಲಿ ರಾಜ್ಯಗಳು ಪರೋಕ್ಷ ಮದ್ಯ ಮಾರಾಟ ಅಥವಾ ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ಗಮನಹರಿಸಬಹುದು’ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಸದಸ್ಯ ಪೀಠ ಹೇಳಿದೆ.
2 ಹಂತಗಳ ಲಾಕ್ಡೌನ್ ಮುಗಿದ ಬಳಿಕ ಮೇ 4ರಿಂದ ಕೇಂದ್ರ ಸರ್ಕಾರ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿತ್ತು. ಆದಾಯದ ಪ್ರಮುಖ ಮೂಲವಾಗಿರುವುದರಿಂದ ಬಹುತೇಕ ಎಲ್ಲ ರಾಜ್ಯಗಳೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದವು. ಮದ್ಯದಂಗಡಿಗಳು ತೆರೆಯುತ್ತಿದ್ದಂತೆ ಜನರು ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿರುವ ದೃಶ್ಯ ದೇಶದಾದ್ಯಂತ ಕಂಡುಬಂದಿತ್ತು.
ಹೆಚ್ಚಿನ ರಾಜ್ಯಗಳಲ್ಲಿ ಮದ್ಯ ಮಾರಾಟವೇ ಸರ್ಕಾರದ ಆದಾಯದ ಪ್ರಮುಖ ಮೂಲವಾಗಿದೆ. ಕೆಲವು ರಾಜ್ಯಗಳಲ್ಲಿ ಮದ್ಯ ಮಾರಾಟದ ಆದಾಯ ಹಂಚಿಕೆ ಪ್ರಮಾಣ ಶೇ 25–40ರಷ್ಟಿದೆ.