ಚೆನ್ನೈ: ಲಡಾಖ್ನ ಗಾಲ್ವನ್ ಕಣಿವೆ ಪ್ರದೇಶದ ಭಾರತ–ಚೀನಾ ವಾಸ್ತವ ಗಡಿ ರೇಖೆ ಬಳಿ ಚೀನಾದ ಸೈನಿಕರೊಂದಿಗೆ ಸೆಣಸುವಾಗ ಹುತಾತ್ಮರಾದ ಭಾರತೀಯ ಸೇನೆಯ ಮೂವರು ಯೋಧರಲ್ಲಿ ತಮಿಳುನಾಡಿನ ಹವಾಲ್ದಾರ್ ಪಳನಿ ಕೂಡ ಒಬ್ಬರು. ಹುತಾತ್ಮ ಯೋಧರಿಗೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಡುಕಲೂರು ಗ್ರಾಮದವರಾದ ಪಳನಿ ಅವರು ಇಬ್ಬರು ಮಕ್ಕಳ ತಂದೆಯಾಗಿದ್ದು, 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
ಹುತಾತ್ಮ ಯೋಧ ಪಳನಿ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ₹ 20 ಲಕ್ಷ ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗವನ್ನು (ಅರ್ಹತೆಯ ಆಧಾರದ ಮೇಲೆ) ನೀಡುವುದಾಗಿ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಸೇರಿದಂತೆ ಇತರೆ ವಿರೋಧ ಪಕ್ಷದ ನಾಯಕರು ಹೇಳಿಕೆ ಬಿಡುಗಡೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಸಂತಾಪ ಮತ್ತು ದುಃಖಿತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಹುತಾತ್ಮ ಯೋಧ ಪಳನಿ ಅವರ ಮಾವ ನಾಚಿಯಪ್ಪನ್ ಮಾತನಾಡಿ, ರಾಜಸ್ಥಾನದ ಸೇನಾ ಅಧಿಕಾರಿಯೊಬ್ಬರು ಕರೆ ಮಾಡಿ ನಮಗೆ ಮಾಹಿತಿ ನೀಡಿದರು. ಈ ವರ್ಷದ ಜನವರಿಯಲ್ಲಿ ನಮ್ಮ ಊರಿನ ಈ ಮನೆಗೆ ಬಂದಿದ್ದರು. ಕುಟುಂಬವು ಅವರ ಆದಾಯದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ' ಎಂದು ಹೇಳಿದ್ದಾರೆ.
ಪಳನಿ ಮತ್ತು ಅವರ ಮಗಳಿಗೆ 6ನೇ ತರಗತಿಯಲ್ಲಿ ಓದುತ್ತಿದ್ದ ಮಗ ಮತ್ತು 3ನೇ ತರಗತಿಗೆ ಸೇರಿರುವ ಮಗಳು ಇದ್ದಾರೆ. ಹುತಾತ್ಮ ಯೋಧನ ಪತ್ನಿಯು ಪದವೀಧರೆಯಾಗಿದ್ದು, ರಾಮನಾಥಪುರಂ ಜಿಲ್ಲೆಯ ಕಾಲೇಜಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.