ಹೈದರಾಬಾದ್: ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ಭೇಟಿಯಾಗುವುದಕ್ಕೂ ಮುನ್ನ ತೆಲಂಗಾಣದ ಬಿಜೆಪಿ ನಿಯೋಗವನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ನಿಯೋಗವು ರಾಜ್ಯದಲ್ಲಿನ ಕೊರೊನಾ ಸೋಂಕಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳ ಭೇಟಿಯಾಗಲು ಮುಂದಾಗಿತ್ತು.
ಬಿಜೆಪಿ ನಾಯಕ ಡಾ. ಕೆ.ಲಕ್ಷ್ಮಣ್, ಎನ್.ರಾಮಚಂದ್ರ ರಾವ್, ಎಂಎಲ್ಸಿ ಎನ್.ರಾಮಚಂದ್ರ ರಾವ್ ಹಾಗೂ ಶಾಸಕ ರಾಜಾ ಸಿಂಗ್ ನಿಯೋಗವನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.
‘ರಾಜ್ಯದಲ್ಲಿನ ಕೊರೊನಾ ಪರಿಸ್ಥಿತಿಯ ಬಗ್ಗೆ ಜ್ಞಾಪಕ ಪತ್ರವನ್ನು ನೀಡುವ ಉದ್ದೇಶದಿಂದ ಪಕ್ಷದ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಉದ್ದೇಶಿಸಿದ್ದೆ. ಆದರೆ, ಅದಕ್ಕೂ ಮುನ್ನ ಮನೆಗೆ ಬಂದ ಪೊಲೀಸರು ನಮ್ಮನ್ನು ಗೃಹಬಂಧನದಲ್ಲಿ ಇರಿಸಿದರು’ ಎಂದು ಡಾ. ಕೆ.ಲಕ್ಷ್ಮಣ್ ಹೇಳಿದ್ದಾರೆ.
ತೆಲಂಗಾಣದಲ್ಲಿ ಗುರುವಾರ ಹೊಸದಾಗಿ 208 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4,320ಕ್ಕೆ ಏರಿಕೆಯಾಗಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಸದ್ಯ 2,162 ಸಕ್ರಿಯ ಪ್ರಕರಣಗಳಿವೆ. ಈವರೆಗೆ 165 ಮಂದಿ ಮೃತಪಟ್ಟಿದ್ದಾರೆ.